
ಬೆಂಗಳೂರು, ಜುಲೈ 09: ಟೀಂ ಇಂಡಿಯಾದ ಮಾಜಿ ನಾಯಕ, ಜ್ಯೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಬೆಂಗಳೂರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಯುವ ಕ್ರಿಕೆಟರ್ ಗಳ ಭವಿಷ್ಯ ರೂಪಿಸ ಹೊಣೆ ಹೊತ್ತಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟರ್ಸ್ ಬಗ್ಗೆ ಕೂಡಾ ಕಾಳಜಿ ವಹಿಸಲಿದ್ದಾರೆ.
ಗಾಯಗೊಂಡ ಕ್ರಿಕೆಟಿಗರ ಪುನಃಶ್ಚೇತನ ಶಿಬಿರಗಳ ಉಸ್ತುವಾರಿಯೂ ದ್ರಾವಿಡ್ ವಹಿಸಿಕೊಳ್ಳಲಿದ್ದಾರೆ. ಹೊಸ ಹುದ್ದೆ ವಹಿಸಿಕೊಡ ಬಳಿಕ ದ್ರಾವಿಡ್ ಅವರು ಭಾರತ ಎ ಹಾಗೂ 19 ವಯೋಮಿತಿ ತಂಡಗಳೊಂದಿಗೆ ಮುಂದುವರೆಯುವುದು ಕಷ್ಟವಾಗಲಿದೆ.
ಹೀಗಾಗಿ, ಮಾಜಿ ವೇಗಿ ಪರಾಸ್ ಮಾಂಬ್ರೆ ಹಾಗೂ ಅಭಯ್ ಶರ್ಮ ಅವರು ಸದ್ಯಕ್ಕೆ ಜೂನಿಯರ್ ತಂಡದ ನಿರ್ವಹಣೆ ಮಾಡಲಿದ್ದಾರೆ. ಎನ್ಸಿಎಯಲ್ಲಿ ಅವರಿಗೆ ನೀಡಿರುವ ಹುದ್ದೆ ಬಹಳ ದೊಡ್ಡದಿದೆ' ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ನ್ಯಾ. ಲೋಧಾ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಬಿಸಿಸಿಐ ಆದ್ಯತೆ ನೀಡುತ್ತಿದ್ದು, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಸೇರಿದಂತೆ ಮಾಜಿ ಆಟಗಾರರ ಲಾಭದಾಯಕ ಹುದ್ದೆ ಆರೋಪದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಶಿಸ್ತು ಪಾಲನಾ ಸಮಿತಿ ಅಧಿಕಾರಿಗಳು ಹೇಳಿದರು.