ನಿಜವಾದ ಫಿನಿಶರ್ಗಳು ಸೂರ್ಯಕುಮಾರ್ ಯಾದವ್ನಂತವರು
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾಕ್ಕೆ ಉತ್ತಮ ಫಿನಿಶರ್ಗಳು ಯಾರು ಎಂದು ಚರ್ಚಿಸುವಾಗ, ಕೆ. ಶ್ರೀಕಾಂತ್ ಹೇಳಿದ್ದು ಹೀಗೆ, "ನಾನು ದಿನೇಶ್ ಕಾರ್ತಿಕ್ ಅವರನ್ನು ಉತ್ತಮ ಫಿನಿಶರ್ ಎಂದು ಕರೆಯುತ್ತೇನೆ, ಆದರೆ ನಿಜವಾದ ಫಿನಿಶರ್ಗಳು ಸೂರ್ಯಕುಮಾರ್ ಯಾದವ್ನಂತಹ ವ್ಯಕ್ತಿಗಳು. ಅವರು ಅದ್ಭುತ ಫಿನಿಶರ್," ಎಂದು ಹೊಗಳಿದ್ದಾರೆ.
"ನಿಮ್ಮಲ್ಲಿ ಅದ್ಭುತ ಫಿನಿಶರ್ ಆಗಿರುವ ರಿಷಭ್ ಪಂತ್ ಇದ್ದಾರೆ. ನಿಮ್ಮಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ, ಅವರು ಅದ್ಭುತ ಫಿನಿಶರ್ ಕೂಡ ಆಗಿದ್ದಾರೆ. ಫಿನಿಶರ್ ಎಂದರೆ 8ನೇ ಓವರ್ನಿಂದ ತಂಡವನ್ನು ತೆಗೆದುಕೊಂಡು ಪಂದ್ಯ ಮುಗಿಯುವವರೆಗೆ ಮುಂದುವರಿಯುವ ವ್ಯಕ್ತಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ," ಎಂದು ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲೂಸ್'ನಲ್ಲಿ ಭಾರತ ತಂಡದ ಮಾಜಿ ಆಟಗಾರರೂ ಆಗಿರುವ ಕೆ. ಶ್ರೀಕಾಂತ್ ಹೇಳಿದ್ದಾರೆ.
ರೋಹಿತ್ ಶರ್ಮಾ, ಕೆಎಲ್ ರಾಹುಲ್ ಉತ್ತಮ ಫಿನಿಶರ್
"ನಿಮಗೆ ಫಿನಿಶರ್ ಎಂದರೆ ಏನು? ನನ್ನ ಪುಸ್ತಕದಲ್ಲಿ ಫಿನಿಶರ್ ಎಂದರೆ 8ನೇ ಅಥವಾ 12ನೇ ಓವರ್ನಿಂದ 20ನೇ ಓವರ್ನವರೆಗೆ ಬ್ಯಾಟಿಂಗ್ ಮಾಡಿ, ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿ ಕೊಡಬಲ್ಲ ವ್ಯಕ್ತಿ. ಅವನು 6ನೇ ಓವರ್ ಅಥವಾ 8ನೇ ಓವರ್ನಿಂದ ಆಟ ಶುರುಮಾಡುತ್ತಾನೆ. ಆದರೆ ಉತ್ತಮ ಫಿನಿಶರ್ ಎಲ್ಲಿದ್ದಾನೆ? ಎಂದು ಕೇಳಿದರೆ, ಕೆಎಲ್ ರಾಹುಲ್ ಉತ್ತಮ ಫಿನಿಶರ್, ರೋಹಿತ್ ಶರ್ಮಾ ಉತ್ತಮ ಫಿನಿಶರ್, ಅವರು ಓಪನಿಂಗ್ಗೆ ಹೋಗುತ್ತಾರೆ. ನೀವು ಕೊನೆಯ 5 ಓವರ್ಗಳನ್ನು ಬ್ಯಾಟ್ ಮಾಡಿದವರನ್ನು ಫಿನಿಶರ್ ಎಂದು ನಾನು ಹೇಳಲಾರೆ," ಎಂದರು.
ಆದಾಗ್ಯೂ, ವಿಕೆಟ್ ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಏಷ್ಯಾಕಪ್ಗಾಗಿ ಭಾರತ ತಂಡದಲ್ಲಿ ಖಂಡಿತವಾಗಿಯೂ ಸ್ಥಾನ ಪಡೆಯುತ್ತಾರೆ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಕೆ. ಶ್ರೀಕಾಂತ್ ಹೇಳಿದ್ದು, "ದಿನೇಶ್ ಕಾರ್ತಿಕ್ ಖಂಡಿತವಾಗಿಯೂ ನನ್ನ ತಂಡದಲ್ಲಿ ಸ್ಥಾನ ಪಡೆಯುತ್ತಾರೆ," ಎಂದು ಉಲ್ಲೇಖಿಸಿದರು.
ಭಾರತ ಟಿ20 ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್
2022ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ, ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯ ಸಮಯದಲ್ಲಿ ಭಾರತ ಟಿ20 ತಂಡಕ್ಕೆ ಮರಳಿದರು. ಅಂದಿನಿಂದ ಫಿನಿಶರ್ ಆಗಿ ಅವಕಾಶಗಳು ಸಿಗುತ್ತಿವೆ. ಬಿಸಿಸಿಐ ಕೂಡ ಅವರನ್ನು ಏಷ್ಯಾಕಪ್ಗಾಗಿ 15 ಸದಸ್ಯರ ತಂಡದಲ್ಲಿ ಹೆಸರಿಸಿದೆ.
ಏಷ್ಯಾ ಕಪ್ 2022 ಯುಎಇಯಲ್ಲಿ ಆಗಸ್ಟ್ 27ರಂದು ಪ್ರಾರಂಭವಾಗಲಿದೆ. ಭಾರತ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗುತ್ತವೆ.
ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.