ಪ್ರಸಿದ್ಧ್ ಕೃಷ್ಣ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್
ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಸರಣಿಯ ಮೊದಲ ಎರಡು ಪಂದ್ಯದಲ್ಲಿ ಭಾರತ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಬಳಿಕ ಮೂರನೇ ವೇಗಿಯಾಗಿ ಕಣಕ್ಕಿಳಿದಿದ್ದರು. ಎರಡು ಪಂದ್ಯದಲ್ಲಿ ಕೂಡ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾಗಿದ್ದರು. ಆದರೆ ರನ್ ನೀಡುವ ವಿಚಾರದಲ್ಲಿ ಅವರು ದುಬಾರಿಯೆನಿಸಿದ್ದಾರೆ. ಮೊದಲ ಪಂದ್ಯದಲ್ಲಿ ಐದು ಓವರ್ಗಳಲ್ಲಿ 26 ರನ್ ನೀಡಿದ್ದರೆ ಎರಡನೇ ಪಂದ್ಯದಲ್ಲಿ 53 ರನ್ ನೀಡಿದ್ದರು. ಹೀಗಾಗಿ ಕೃಷ್ಣ ಬದಲಿಗೆ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಿದರೆ ತಂಡಕ್ಕೆ ನೆರವಾಗುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಾಗೂ ಇಂಗ್ಲೆಂಡ್ ಕಂಡೀಶನ್ನಲ್ಲಿ ಶಾರ್ದೂಲ್ ಹೆಚ್ಚಿನ ಅನುಭವ ಹೊಂದಿದ್ದು ಇದು ತಂಡಕ್ಕೆ ನೆರವಾಗಬಹುದು.
ಮೂರನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ
ಮೊದಲ ಎರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗಿಯಾಗಿ ದಾಳಿ ನಡೆಸಿದ್ದಾರೆ. ಈ ಪಂದ್ಯಗಳಲ್ಲಿ ಪಾಂಡ್ಯ ಬೌಲಿಂಗ್ ಪ್ರದರ್ಶನ ಗಮನಾರ್ಹವಾಗಿತ್ತು. ಮಹತ್ವದ ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಪಾಂಡ್ಯ ಎಕಾನಮಿ ವಿಚಾರದಲ್ಲಿಯೂ ಗಮನಸೆಳೆದಿದ್ದಾರೆ. ಇನ್ನು ಇಂಗ್ಲೆಂಡ್ನ ಈ ಪ್ರವಾಸದಲ್ಲಿ ಹಾರ್ದಿಕ್ ಸ್ವಿಂಗ್ ಮೂಲಕವೂ ಮಿಂಚಿದ್ದು ಭಾರತ ತಂಡಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಬಲ್ಲರು. ಹೀಗಾಗಿ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಹೆಚ್ಚಿನ ಓವರ್ಗಳ ಬೌಲಿಂಗ್ ನಡೆಸುವ ಅವಕಾಶ ನೀಡಬೇಕಿದೆ.
ಸೂರ್ಯಕುಮಾರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ
ಭಾರತ ತಂಡದ ಪರವಾಗಿ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಟಿ20 ಹಾಗೂ ಏಕದಿನ ಮಾದರಿಯಲ್ಲಿ ಸೂರ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ಫಾರ್ಮ್ಅನ್ನು ಭಾರತ ತಂಡ ಬಳಸಿಕೊಳ್ಳಬೇಕಿದೆ. ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶೈಲಿ ಹಾಗೂ ಅವರ ಫಾರ್ಮ್ ನಾಲ್ಕನೇ ಕ್ರಮಾಂಕಕ್ಕೆ ಹೆಚ್ಚು ಸೂಕ್ತವಾಗಲಿದೆ. ಅಲ್ಲದೆ ಎರಡು ವಿಕೆಟ್ ಕಳೆದುಕೊಂಡ ಬಳಿಕ ಕುಸಿಯದಂತೆ ತಡೆಯುವ ಸಾಮರ್ಥ್ಯ ಸೂರ್ಯಕುಮಾರ್ಗೆ ಇದೆ. ಮತ್ತೊಂದೆಡೆ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಇಳಿದು ಅವರ ಸ್ವಾಭಾವಿಕ ಆಟವನ್ನು ಆಡಲು ಅವಕಾಶ ನೀಡಿದರೆ ತಂಡಕ್ಕೆ ನೆರವಾಗಬಹುದು.