ಹಾರ್ದಿಕ್ ಪಾಂಡ್ಯ ಅತ್ಯುತ್ತಮ ನಾಯಕ
ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಮಾತನಾಡಿರುವ ರಶೀದ್ ಖಾನ್ "ಪಾಂಡ್ಯ ಅದ್ಭುತ ಆಟಗಾರ. ಅವರು ರಾಷ್ಟ್ರೀಯ ತಂಡದ ನಾಯಕರಾಗಲು ಅರ್ಹರು ಎಂದು ನಾನು ಭಾವಿಸುತ್ತೇನೆ. ಅವರ ನಾಯಕತ್ವದ ತಂಡದಲ್ಲಿ ಆಡಿದ್ದೇನೆ. ಅವರನ್ನು ಭಾರತ ಟಿ20 ತಂಡದ ಖಾಯಂ ನಾಯಕನನ್ನಾಗಿ ಮಾಡಿದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಆಟಗಾರರನ್ನು ನಿರ್ವಹಿಸುವುದು ಕಷ್ಟ ಮತ್ತು ಅವರು ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಐಪಿಎಲ್ನಲ್ಲಿ ತಮ್ಮ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ." ಎಂದು ಹೇಳಿದ್ದಾರೆ.
"ಅವರಿಗೆ ಅವಕಾಶ ಸಿಕ್ಕರೆ ನಾನು ಹೆಚ್ಚು ಸಂತೋಷಪಡುತ್ತೇನೆ. 2023ರ ಐಪಿಎಲ್ನಲ್ಲಿ ಮತ್ತೆ ಗುಜರಾತ್ ಟೈಟಾನ್ಸ್ನ ಭಾಗವಾಗಲು ಮತ್ತು ಅವರ ನಾಯಕತ್ವದಲ್ಲಿ ಆಡಲು ಕಾಯುತ್ತಿದ್ದೇನೆ." ಎಂದು ಹೇಳಿದ್ದಾರೆ.
ನಾಯಕನಾಗಿ ಯಶಸ್ಸು ಕಂಡ ಪಾಂಡ್ಯ
ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಿ ಕೂಡ ಯಶಸ್ಸು ಕಂಡಿದ್ದಾರೆ. 2022ರಲ್ಲಿ ಭಾರತ ಐರ್ಲೆಂಡ್ ಪ್ರವಾಸ ಮಾಡಿದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತ ಟ20 ತಂಡದ ನಾಯಕನಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ಐರ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದುಕೊಂಡಿತು.
ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ನಂತರ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯರನ್ನೇ ನಾಯಕರನ್ನಾಗಿ ಮುಂದುವರೆಸುವಂತೆ ಹಲವು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದರು.
2024ರ ಟಿ20 ವಿಶ್ವಕಪ್ಗೆ ಸಿದ್ಧತೆ
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸಿದ ಬಳಿಕ ಬಿಸಿಸಿಐ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. 2024ರ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಿದೆ.
2023ರಲ್ಲಿ ಏಕದಿನ ವಿಶ್ವಕಪ್ ಇರುವುದರಿಂದ ರೋಹಿತ್ ಶರ್ಮಾಗೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕೇಳಿಕೊಂಡು, ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯರನ್ನು ಅಧಿಕೃತ ನಾಯಕನಾಗಿ ಘೋಷಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಬಿಸಿಸಿಐ ಸದ್ಯ ಆಯ್ಕೆದಾರರ ಸಮಿತಿಗಾಗಿ ಅರ್ಜಿ ಆಹ್ವಾನಿಸಿದ್ದು, ನೂತನ ಆಯ್ಕೆ ಸಮಿತಿ ಡಿಸೆಂಬರ್ ಮಧ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಭಾರತ 2023ರ ಆರಂಭದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಅದಕ್ಕೆ ತಂಡವನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.