ಟೀಮ್ ಇಂಡಿಯಾ ಮೇಲೆ ಆರೋಪ ಹೊರಿಸುವ ಮುನ್ನ ಇಂಗ್ಲೆಂಡ್ ಸರಿ ಇದೆಯಾ ನೋಡಿ: ಪೀಟರ್ಸನ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಸಂಪೂರ್ಣವಾಗಿ ಮುಗಿಯದೇ ಕೊರೋನಾವೈರಸ್ ಕಾಟಕ್ಕೆ ಮೊಟಕುಗೊಂಡಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವೆ ಆಯೋಜಿಸಲಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ 4 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯ ಆರಂಭವಾಗುವ ಮುನ್ನವೇ ಟೀಮ್ ಇಂಡಿಯಾ ಸಿಬ್ಬಂದಿ ವರ್ಗದವರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪಂದ್ಯವನ್ನು ನಡೆಸದೇ ರದ್ದುಗೊಳಿಸಲಾಗಿದೆ.
ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ಸೆಪ್ಟೆಂಬರ್ 10ರ ಶುಕ್ರವಾರದಂದು ಲಂಡನ್ ನಗರದ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆರಂಭಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಡಿಕೊಂಡಿತ್ತು. ಈ ಸರಣಿಯ ಅಂತಿಮ ಪಂದ್ಯವನ್ನು ಕಣ್ತುಂಬಿಕೊಳ್ಳಲು ಹಲವಾರು ಪ್ರೇಕ್ಷಕರು ಟಿಕೆಟ್ಗಳನ್ನು ಖರೀದಿಸಿ ಕ್ರೀಡಾಂಗಣದ ಕಡೆ ಹೆಜ್ಜೆ ಹಾಕಿದ್ದರು. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂಬ ವಿಷಯವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಂಚಿಕೊಂಡಿತು.
ಈ ಪಂದ್ಯ ಆರಂಭವಾಗುವ ಮುನ್ನ ಟೀಮ್ ಇಂಡಿಯಾದ ಫಿಸಿಯೋ ಯೋಗೇಶ್ ಪಾರ್ಮರ್ ಎಂಬುವವರಿಗೆ ಕೊರೊನಾ ಸೋಂಕು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಪಂದ್ಯ ಆರಂಭವಾಗುವ ಮುನ್ನಾ ದಿನ ಕೂಡ ತರಬೇತಿಯಲ್ಲಿ ಭಾಗವಹಿಸಿರಲಿಲ್ಲ ಹಾಗೂ ಪಂದ್ಯ ನಡೆಯುವ ದಿನ ಟೀಮ್ ಇಂಡಿಯಾ ತನ್ನ ಆಟಗಾರರನ್ನು ಕಣಕ್ಕಿಳಿಸಲು ಸಿದ್ಧವಿರಲಿಲ್ಲ. ಆಟಕ್ಕಿಂತ ತಮ್ಮ ತಂಡದ ಆಟಗಾರರ ಜೀವ ಮುಖ್ಯ ಎಂಬ ಕಾರಣಕ್ಕೆ ಟೀಮ್ ಇಂಡಿಯಾ ಈ ನಿರ್ಧಾರವನ್ನು ಕೈಗೊಂಡಿತ್ತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗದೇ ರದ್ದಾಯಿತು. ಟೀಮ್ ಇಂಡಿಯಾ ಹೀಗೆ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ಕುರಿತು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಪಂದ್ಯ ಇನ್ನೇನು ಆರಂಭವಾಗುವ ಕ್ಷಣದಲ್ಲಿ ಟೀಮ್ ಇಂಡಿಯಾ ಪಂದ್ಯವನ್ನಾಡದೇ ಹಿಂದೆ ಸರಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕೆಗಳನ್ನು ವ್ಯಕ್ತಪಡಿಸಿದ್ದರು.
ಹೀಗೆ ಟೀಮ್ ಇಂಡಿಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳು ಸಾಲುಸಾಲು ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರಾದ ಕೆವಿನ್ ಪೀಟರ್ಸನ್ ಮತ್ತು ಮೈಕಲ್ ವಾನ್ ಟೀಮ್ ಇಂಡಿಯಾ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಿರುವವರ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಇಂಗ್ಲೆಂಡ್ ಕೂಡ ಸೌತ್ಆಫ್ರಿಕಾ ಕ್ರಿಕೆಟ್ಗೆ ಅವಮಾನ ಮಾಡಿತ್ತು ಎಂದ ಮೈಕಲ್ ವಾನ್!
ಭಾರತ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಆಡದೆ ಹಿಂದೆ ಸರಿದಿರುವುದರ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್ ವಾನ್ 'ಟೀಮ್ ಇಂಡಿಯಾ ಪಂದ್ಯವನ್ನು ಆಡದೆ ಇಂಗ್ಲೆಂಡ್ ಕ್ರಿಕೆಟ್ಗೆ ಅವಮಾನ ಮಾಡಿತು ಎಂದು ಟೀಕಿಸುತ್ತಿದ್ದೀರಿ ಆದರೆ ಈ ಹಿಂದೆ ಇಂಗ್ಲೆಂಡ್ ತಂಡ ಕೂಡ ಸೌತ್ ಆಫ್ರಿಕಾ ವಿರುದ್ಧ ಇದೇ ಕೊರೋನಾವೈರಸ್ ಕಾರಣದಿಂದ ಪಂದ್ಯವನ್ನಾಡದೇ ಸರಣಿಯಿಂದ ಹಿಂದೆ ಸರಿಯುವುದರ ಮೂಲಕ ಸೌತ್ಆಫ್ರಿಕಾ ಕ್ರಿಕೆಟ್ಗೆ ಅವಮಾನವನ್ನು ಮಾಡಿತ್ತು' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬೇರೆಯವರ ಕಡೆಗೆ ಬೆರಳು ತೋರಿಸಬೇಡಿ ಎಂದ ಪೀಟರ್ಸನ್
ಭಾರತ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿರುವುದರ ಕುರಿತು ಟೀಕೆಗಳನ್ನು ಮಾಡುತ್ತಿರುವವರ ವಿರುದ್ಧ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಕಿಡಿಕಾರಿದ್ದಾರೆ. ಪೀಟರ್ಸನ್ ಕೂಡ ಇಂಗ್ಲೆಂಡ್ ದ. ಆಫ್ರಿಕಾ ವಿರುದ್ಧ ಕೊರೊನಾ ವೈರಸ್ ಭೀತಿಯಿಂದ ಸರಣಿಯನ್ನು ಆಡದೇ ಹಿಂದೆ ಸರಿದಿದ್ದನ್ನು ಉದಾಹರಣೆಯಾಗಿ ತೆಗೆದುಕೊಂಡು ಟೀಕಾಕಾರರಿಗೆ ಚಾಟಿ ಬೀಸಿದ್ದಾರೆ. 'ಭಾರತ ಪಂದ್ಯದಿಂದ ಹಿಂದೆ ಸರಿಯುವುದರ ಮೂಲಕ ಇಂಗ್ಲೆಂಡ್ ಕ್ರಿಕೆಟ್ಗೆ ಅವಮಾನಿಸಿದೆ ಎನ್ನುತ್ತಿದ್ದೀರಿ ಈ ಹಿಂದೆ ಇಂಗ್ಲೆಂಡ್ ಕೂಡ ಇದೇ ರೀತಿ ಸೌತ್ಆಫ್ರಿಕಾ ವಿರುದ್ಧದ ಸರಣಿಯಿಂದ ಹಿಂದೆ ಸರಿದಿತ್ತು, ಹೀಗಾಗಿ ಬೇರೊಬ್ಬರ ಕಡೆ ಬೆರಳು ತೋರಿಸುವ ಮುನ್ನ ನಾವು ಸರಿ ಇದ್ದೀವಾ ಎಂಬುದನ್ನು ನೋಡಿಕೊಳ್ಳಬೇಕಿದೆ' ಎಂದು ಕೆವಿನ್ ಪೀಟರ್ಸನ್ ಭಾರತ ವಿರುದ್ಧ ಟೀಕೆ ನಡೆಸುತ್ತಿರುವವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದಾರೆ.

ರದ್ದಾದ ಪಂದ್ಯ ಮುಂದಿನ ವರ್ಷ ನಡೆಯಲಿದೆ
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅಂತಿಮ ಟೆಸ್ಟ್ ಪಂದ್ಯ ಕೊರೋನಾವೈರಸ್ ಕಾರಣದಿಂದ ರದ್ದಾಗಿದೆ. ಮುಂದಿನ ವರ್ಷದಲ್ಲಿ ಟೀಮ್ ಇಂಡಿಯಾ ಸೀಮಿತ ಓವರ್ಗಳ ಸರಣಿಗಳನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ಈ ಪಂದ್ಯವನ್ನು ಮುಂದುವರೆಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications