ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನದ ಕುರಿತು ವಿಕ್ರಂ ರಾಥೋರ್ ಹೇಳಿದ್ದಿಷ್ಟು
ಅಜಿಂಕ್ಯ ರಹಾನೆ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿಯೂ ಕಳಪೆ ಪ್ರದರ್ಶನ ನೀಡಿ ವಿಫಲರಾದ ಕಾರಣ ಅವರನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. ಇನ್ನು ಈ ವಿಷಯದ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ 'ಓರ್ವ ಬ್ಯಾಟ್ಸ್ಮನ್ ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೆಲವೊಮ್ಮೆ ಈ ರೀತಿಯ ಕಳಪೆ ಪ್ರದರ್ಶನದ ಘಟ್ಟವನ್ನು ಎದುರಿಸುತ್ತಾನೆ. ಇಂತಹ ಸಂದರ್ಭದಲ್ಲಿ ತಂಡವಾಗಿ ನಾವು ಆ ಬ್ಯಾಟ್ಸ್ಮನ್ ಪರ ನಿಲ್ಲಬೇಕು ಆಗ ಮಾತ್ರ ಆ ಆಟಗಾರ ಕಳಪೆ ಫಾರ್ಮ್ ದಾಟಿ ಉತ್ತಮ ಪ್ರದರ್ಶನವನ್ನು ನೀಡಬಲ್ಲ. ಚೇತೇಶ್ವರ್ ಪೂಜಾರ ಕೂಡ ಕಳಪೆ ಫಾರ್ಮ್ನಲ್ಲಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗುತ್ತಿದ್ದಾಗ ತಂಡವಾಗಿ ನಾವು ಪೂಜಾರಾ ಪರ ನಿಂತ ಕಾರಣದಿಂದಲೇ ಈಗ ಅವರು ಕಳಪೆ ಫಾರ್ಮ್ ದಾಟಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದೇ ರೀತಿ ಅಜಿಂಕ್ಯ ರಹಾನೆ ಕೂಡ ಮುಂದಿನ ದಿನಗಳಲ್ಲಿ ಕಳಪೆ ಫಾರ್ಮ್ ಮೀರಿ ಉತ್ತಮ ಪ್ರದರ್ಶನ ನೀಡಲಿದ್ದಾರೆ' ಎಂದು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಅಜಿಂಕ್ಯ ರಹಾನೆ ಬೆನ್ನಿಗೆ ನಿಂತಿದ್ದಾರೆ.
ಸರಣಿಯಲ್ಲಿ ಅಜಿಂಕ್ಯಾ ರಹಾನೆ ಕಳಪೆ ಪ್ರದರ್ಶನ
ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳಲ್ಲಿ ಕೇವಲ 109 ರನ್ ಗಳಿಸಿರುವ ಅಜಿಂಕ್ಯ ರಹಾನೆ ಅತಿ ಕೆಟ್ಟ ಫಾರ್ಮ್ನಲ್ಲಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 61 ರನ್ ಬಾರಿಸಿದ ಅಜಿಂಕ್ಯ ರಹಾನೆ ಅದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಇನ್ನಿಂಗ್ಸ್ನಲ್ಲಿಯೂ ಉತ್ತಮ ಆಟವನ್ನು ಆಡಿಯೇ ಇಲ್ಲ. ಇನ್ನು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 14 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ದ್ವಿತೀಯ ಇನ್ನಿಂಗ್ಸ್ನಲ್ಲಿ 8 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಡಕ್ಔಟ್ ಆದರು.
ಅಜಿಂಕ್ಯ ರಹಾನೆಯನ್ನು ಕೈಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡಿ ಎಂದು ಕೇಳಿ ಬಂದ ಕೂಗು
ಇನ್ನು ಅಜಿಂಕ್ಯ ರಹಾನೆ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಅವರನ್ನು ತಂಡದಿಂದ ಕೈ ಬಿಟ್ಟು ಉಳಿದ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಬೇಕು ಎಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲಿಯೂ ಸೂರ್ಯಕುಮಾರ್ ಯಾದವ್ ಅಥವಾ ಹನುಮ ವಿಹಾರಿಗೆ ಅಜಿಂಕ್ಯ ರಹಾನೆ ಬದಲು ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವನ್ನು ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು, ಕ್ರೀಡಾ ಪಂಡಿತರು ಹಾಗೂ ಕೆಲ ಮಾಜಿ ಕ್ರಿಕೆಟಿಗರು ಸಹ ವ್ಯಕ್ತಪಡಿಸಿದ್ದಾರೆ.