IND vs SL : ಕಳಪೆ ಫಾರ್ಮ್ ಅಲ್ಲ, ಈ ಕಾರಣಕ್ಕಾಗಿ ರಿಷಬ್ ಪಂತ್ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ

ಬಿಸಿಸಿಐ ಡಿಸೆಂಬರ್ 27 ರಂದು ಮುಂಬರುವ ಶ್ರೀಲಂಕಾ ಸರಣಿಗಾಗಿ ಭಾರತೀಯ ತಂಡವನ್ನು ಘೋಷಿಸಿದೆ. ನಿರೀಕ್ಷೆಯಂತೆ ಟಿ20 ಸರಣಿಗಾಗಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
2023ರ ಏಕದಿನ ವಿಶ್ವಕಪ್ಗಾಗಿ ಭಾರತ ತಂಡ ಸಿದ್ಧತೆ ಆರಂಭಿಸಿದೆ, ಈ ಹಿನ್ನೆಲೆಯಲ್ಲಿ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಯಾರಿಗೆ ಮನ್ನಣೆ ನೀಡಲಾಗುತ್ತದೆ ಎನ್ನುವುದಕ್ಕೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಪ್ರಕಟವಾಗಿರುವ ತಂಡ ಮುನ್ಸೂಚನೆ ನೀಡಿದೆ.
ಅಚ್ಚರಿ ಎನ್ನುವಂತೆ ಹಿರಿಯ ಕ್ರಿಕೆಟಿಗ ಶಿಖರ್ ಧವನ್ರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಕಳಪೆ ಫಾರ್ಮ್ನಲ್ಲಿರುವ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ, ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಕೂಡ ತಂಡಕ್ಕೆ ಆಯ್ಕೆಯಾಗಿಲ್ಲ.
ಟಿ20 ಸರಣಿಗಾಗಿ ಅವರನ್ನು ಕೈಬಿಡುತ್ತಾರೆ ಎನ್ನುವುದನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ಏಕದಿನ ಸರಣಿಗೂ ಕೂಡ ಪಂತ್ಗೆ ಅವಕಾಶ ನೀಡಿಲ್ಲ, 2022ರಲ್ಲಿ ಅವರು ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದಾರೆ. ಇದೇ ಕಾರಣಕ್ಕೆ ಅವರು ತಂಡದಲ್ಲಿ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿತ್ತು. ಆದರೀಗ, ಅವರು ತಂಡದಿಂದ ಹೊರಗುಳಿಯಲು ನಿಜವಾದ ಕಾರಣ ಕಳಪೆ ಫಾರ್ಮ್ ಅಲ್ಲ ಎನ್ನಲಾಗಿದೆ.

ಎರಡು ವಾರ ವಿಶ್ರಾಂತಿ ಪಡೆಯಲಿರುವ ಪಂತ್
ರಿಷಬ್ ಪಂತ್ ಮೊಣಕಾಲಿನ ನಿಗ್ಗಲ್ನಿಂದ ಬಳಲುತ್ತಿದ್ದು, ಅವರು ಎರಡು ವಾರಗಳ ಕಾಲ ಪುನರ್ವಸತಿಗಾಗಿ ಎನ್ಸಿಎಗೆ ವರದಿ ಮಾಡಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಂತ್ ಹಲವು ದಿನಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ, ಕೆಲವು ದೈಹಿಕ ತರಬೇತಿ ವ್ಯಾಯಾಮಗಳಲ್ಲಿ ಭಾಗವಹಿಸಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಹಾಜರಾಗಲಿದ್ದಾರೆ.
ಇದೇ ಕಾರಣಕ್ಕಾಗಿ ಆಯ್ಕೆದಾರರು ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಪರಿಗಣಿಸಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅವರು ತಂಡಕ್ಕೆ ಮರಳುವ ವಿಶ್ವಾಸವಿದೆ ಎನ್ನಲಾಗಿದೆ.
IND vs SL: ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಪಾಂಡ್ಯಗೆ ಟಿ20 ನಾಯಕತ್ವ

ಟೆಸ್ಟ್ ಸರಣಿಗಾಗಿ ಪಂತ್ ಸಿದ್ಧತೆ
ಸೀಮಿತ ಓವರ್ ಪಂದ್ಯಗಳಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡದಿದ್ದರೂ, ಟೆಸ್ಟ್ ಮಾದರಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಹತ್ವದ್ದಾಗಿದೆ. ಈ ಸರಣಿಗಾಗಿ ರಿಷಬ್ ಪಂತ್ ಸಿದ್ಧತೆ ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಅವರನ್ನು ಬಲಪಡಿಸಲು ಕಂಡೀಷನಿಂಗ್ ಸೆಷನ್ ಅನ್ನು ಬಿಸಿಸಿಐ ವೈದ್ಯಕೀಯ ತಂಡ ಶಿಫಾರಸು ಮಾಡಿದೆ. ಜನವರಿ 3 ರಿಂದ ಜನವರಿ 15 ರವರೆಗೆ ಅವರು ಎನ್ಸಿಎನಲ್ಲಿ ಇರಲಿದ್ದಾರೆ.

ಸ್ಯಾಮ್ಸನ್, ಕಿಶಾನ್ ರನ್ ಗಳಿಸಿದರೆ ಪಂತ್ಗೆ ಕಷ್ಟ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದರೆ ರಿಷಬ್ ಪಂತ್ಗೆ ಭಾರತ ಏಕದಿನ ಮತ್ತು ಟಿ20 ತಂಡಕ್ಕೆ ಮರಳುವುದು ಕಷ್ಟವಾಗಲಿದೆ. ಇಶಾನ್ ಕಿಶನ್ ಏಕದಿನ ಸರಣಿಯಲ್ಲಿ ಉತ್ತಮವಾಗಿ ರನ್ ಗಳಿಸಿದರೆ, ಪಂತ್ ವಿಶ್ವಕಪ್ ತಂಡದಿಂದ ಹೊರುಗುಳಿಯುವ ಭೀತಿ ಎದುರಿಸಲಿದ್ದಾರೆ.
ಬಿಸಿಸಿಐ ಪಂತ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಅವರು ಸಂಪೂರ್ಣವಾಗಿ ಗುಣಮುಖರಾಗುವ ಬಗ್ಗೆ ಮಾಹಿತಿ ಇಲ್ಲ. ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಭಾರತ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದ್ದು, ಆ ವೇಳೆಗೆ ಪಂತ್ ಭವಿಷ್ಯ ನಿರ್ಧಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications