ಈ ಹಿಂದೆ ದೊಡ್ಡ ಯಶಸ್ಸು ಸಾಧಿಸಿರಲಿಲ್ಲ ಭುವಿ
ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಭುವನೇಶ್ವರ್ ಕುಮಾರ್ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಎರಡನೇ ಪಂದ್ಯದ ಮೊದಲ ಎಸೆತದಲ್ಲಿಯೇ ಆರಂಭಿಕ ಆಟಗಾರ ಜೇಸನ್ ರಾಯ್ ವಿಕೆಟ್ ಪಡೆದಿದ್ದರು. ಇನ್ನು ಜೊಸ್ ಬಟ್ಲರ್ ಅವರನ್ನು ಸತತ ಎರಡು ಪಂದ್ಯದಲ್ಲಿಯೂ ಅಗ್ಗಕ್ಕೆ ಫೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಭುವಿ. ಆದರೆ ಇದಕ್ಕೂ ಹಿಂದಿನ ಇಂಗ್ಲೆಂಡ್ ಪ್ರವಾಸಗಳಲ್ಲಿ ಭುವನೇಶ್ವರ್ ಕುಮಾರ್ ಹೇಳಿಕೊಳ್ಳುವಂತಾ ಯಶಸ್ಸು ಸಾಧಿಸಿರಲಿಲ್ಲ ಎಂಬುದು ಗಮನಾರ್ಹ. ಆದರೆ ಈ ಬಾರಿ ಹೆಚ್ಚಿನ ಸ್ವಿಂಗ್ ದೊರೆಯುತ್ತಿರುವ ಕಾರಣ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದಾಗಿ ಭುವಿ ಹೇಳಿದ್ದಾರೆ.
ಇಷ್ಟು ಸ್ವಿಂಗ್ ಆಗುತ್ತಿರಲಿಲ್ಲ
"ನಿಜ ಹೇಳಬೇಕೆಂದರೆ ಇದು ನನಗೂ ಗೊತ್ತಿಲ್ಲ. ಇಂಗ್ಲೆಂಡ್ಗೆ ಇದಕ್ಕೂ ಮುನ್ನ ಹಲವು ಬಾರಿ ಬಂದಿದ್ದರೂ ಕಳೆದ ಕೆಲ ಸರಣಿಗಳಲ್ಲಿ ಹೆಚ್ಚು ಸ್ವಿಂಗ್ ಆಗುತ್ತಿರಲಿಲ್ಲ. ಈಗ ಸ್ವಿಂಗ್ ಆಗುತ್ತಿರುವುದನ್ನು ನೋಡಿ ನಾನು ಕುಡ ಅಚ್ಚರಿಪಟ್ಟಿದ್ದೇನೆ. ಅದು ಕೂಡ ಹೆಚ್ಚು ಕಾಲ ಸ್ವಿಂಗ್ ಆಗುತ್ತಿದೆ. ವಿಶೇಷವಾಗಿ ಟಿ20 ಮಾದರಿಯಲ್ಲಿ, ಇನ್ನು ಪಿಚ್ ಕುಡ ಹೆಚ್ಚು ಬೌನ್ಸ್ ಆಗುತ್ತಿದೆ. ಚೆಂಡು ಹೆಚ್ಚಾಗಿ ಸ್ವಿಂಗ್ ಆಗುತ್ತಿದ್ದರೆ ನೀವು ಹೆಚ್ಚು ಬೌಲಿಂಗ್ಅನ್ನು ಆನಂದಿಸುತ್ತೀರಿ" ಎಂದಿದ್ದಾರೆ ವೇಗಿ ಭುವನೇಶ್ವರ್ ಕುಮಾರ್.
ಸ್ವಿಂಗ್ ಆಗುತ್ತಿರುವ ಕಾರಣ ಆಕ್ರಮಣಕಾರಿ ಆಟ
ಮುಂದುವರಿದು ಮಾತನಾಡಿದ ಭುವನೇಶ್ವರ್ ಕುಮಾರ್ "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಸ್ವಿಂಗ್ ಮಾಡುತ್ತಿದ್ದೇನಾ, ಅಥವಾ ವಾತಾವರಣದ ಕಾರಣಕ್ಕಾಗಿ ಆಗುತ್ತಿದೆಯಾ ಅಥವಾ ಚೆಂಡಿನ ಕಾರಣದಿಂದಾಗಿ ಆಗುತ್ತಿದೆಯಾ ಎಂಬುದು ಗೊತ್ತಿಲ್ಲ. ಆದರೆ ಚೆಂಡು ಸ್ವಿಂಗ್ ಆಗುತ್ತಿದೆ ಎಂದರೆ ಅದು ನನ್ನ ಸಾಮರ್ಥ್ಯ. ಅದನ್ನು ನಾನು ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಕ್ರಮಣಕಾರಿ ಆಟಕ್ಕೆ ಮುಮದಾಗುತ್ತೇನೆ. ಎರಡು ಪಂದ್ಯದಲ್ಲಿಯೂ ಚೆಂಡು ಉತ್ತಮವಾಗಿ ಸ್ವಿಂಗ್ ಆಗಲು ಆರಂಬಿಸಿತ್ತು. ನಾನು ಆಕ್ರಮಣಕಾರಿ ಆಡಲು ಮುಂದಾದೆ. ಹೀಗಾಗಿ ವಿಕೆಟ್ ಪಡೆಯಲು ಸಾಧ್ಯವಾಯಿತು" ಎಂದಿದ್ದಾರೆ ಭುವನೇಶ್ವರ್ ಕುಮಾರ್.
ವೈಟ್ವಾಶ್ ಮೇಲೆ ಭಾರತದ ಚಿತ್ತ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಭಾರತ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದೆ. ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು ಈ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯುವಹುಮ್ಮಸ್ಸಿನಲ್ಲಿದೆ. ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಅದ್ಭುತ ಫಾರ್ಮ್ನಲ್ಲಿರುವ ಕಾರಣ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.