ಕೋಲ್ಕತ್ತಾ, ನವೆಂಬರ್ 18 : ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಕೇವಲ 172 ರನ್ ಗಳಿಗೆ ಸರ್ವಪತನ ಕಂಡಿದೆ.
ಭಾರತ ವಿರುದ್ಧ 2ನೇ ದಿನವೂ ಲಂಕಾ ಬೌಲರ್ ಗಳ ಪ್ರಾಬಲ್ಯ
ಪಂದ್ಯ ಆರಂಭವಾದ ದಿನದಿಂದಲೂ ಮಳೆ ಅಡ್ಡಿ ಪಡಿಸುತ್ತಿದ್ದು, ಇದರ ನಡುವೆಯೂ ಲಂಕಾ ಬೌಲರ್ ಗಳು ಪ್ರಾಬಲ್ಯ ತೋರಿದ್ದಾರೆ. ಭಾರತದ ಪರ ಚೇತೇಶ್ವರ ಪೂಜಾರ (52) ಅರ್ಧಶತಕ ಬಾರಿಸಿರುವುದನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ಮನ್ ಗಳು ಲಂಕಾದ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು.
ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಸ್ ರಾಹುಲ್ ಖಾತೆ ತೆರೆಯದೆ ಪೆವಿಲಿಯನ್ ನಡೆದರು. ಇನ್ನು ನಂತರ ಜತೆಯಾದ ಸಹಾ ಮತ್ತು ಜಡೇಜಾ ಕೊಂಚ ಕ್ರೀಸ್ ನಲ್ಲಿ ನಿಂತು ತಂಡಕ್ಕೆ ಆಸರೆಯಾಗುತ್ತಾರೆ ಎಂಬ ಆಸೆ ಹುಟ್ಟಿಸಿದ್ದರು. ಆದರೆ, ಲಂಕಾ ಬೌಲರ್ ಗಳು ಇದಕ್ಕೆ ಕಡಿವಾಣ ಹಾಕಿದರು.
ಸಹಾ 29 ಅಶ್ವಿನ್ 22ರನ್ ಗಳಿಸಲಷ್ಟೆ ಶಕ್ತರಾದರು. ಅಂತಿಮವಾಗಿ ಭಾರತ 3ನೇ ದಿನವಾದ ಶನಿವಾರ 59.3 ಓವರ್ ಗಳಲ್ಲಿ 172 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಶ್ರೀಲಂಕಾ ಪರ ಲಕ್ಮಲ್ 4 ವಿಕೆಟ್ ಪಡೆದು ಮಿಂಚಿದರು. ಲಾಹಿರು ಗಮಾಗೆ, ಶಣಕ ಮತ್ತು ಪೆರೆರಾ ತಲಾ 2 ವಿಕೆಟ್ ಕಬಳಸಿದರು.