
ಬೆಂಗಳೂರು, ಏಪ್ರಿಲ್ 13 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಎಂಟನನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕು ವಿಕೆಟ್ ಗಳ ಜಯ ದಾಖಲಿಸಿದೆ. ಆರ್ ಸಿಬಿ ಗೆಲುವಿನಲ್ಲಿ ವೇಗಿ ಉಮೇಶ್ ಯಾದವ್ ಹಾಗೂ ಎಬಿ ಡಿ ವಿಲಿಯರ್ಸ್ ಮಹತ್ವದ ಪಾತ್ರವಹಿಸಿದರು.
ಬೆಂಗಳೂರು ವಿರುದ್ಧ ಪಂಜಾಬ್ ಸ್ಕೋರ್ ಕಾರ್ಡ್
ಚೇಸಿಂಗ್ : 156ರನ್ ಗುರಿ ಬೆನ್ನು ಹತ್ತಿದ ಆರ್ ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಬ್ರೆಂಡನ್ ಮೆಕಲಮ್ ತಮ್ಮ ನೆಚ್ಚಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿದರು.
ಐಪಿಎಲ್ ವಿಶೇಷ ಪುಟ | ಬೆಂಗಳೂರು ವೇಳಾಪಟ್ಟಿ | ಪಂಜಾಬ್ ವೇಳಾಪಟ್ಟಿ
ಆರಂಭಿಕ ಆಟಗಾರ ಕ್ವಿಂಟಾನ್ ಡಿಕಾಕ್ 34 ಎಸೆತಗಳಲ್ಲಿ 45ರನ್ ಗಳಿಸಿ ಉಪಯುಕ್ತ ಕೊಡುಗೆ ನೀಡಿದರು. ನಾಯಕ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 21ರನ್ ಗಳಿಸಿ, 17 ವರ್ಷ ವಯಸ್ಸಿನ ಆಫ್ಘನ್ ಸ್ಪಿನ್ನರ್ ರಹಮಾನ್ ಸ್ಪಿನ್ ಮೋಡಿ ಅರಿಯದೆ ಕ್ಲೀನ್ ಬೋಲ್ಡ್ ಆದರು.
ಎಬಿ ಡಿ ವಿಲಿಯರ್ಸ್ 4 ಸಿಕ್ಸರ್, 2 ಬೌಂಡರಿ ಸಿಡಿಸಿ 40 ಎಸೆತಗಳಲ್ಲಿ 57ರನ್ ಗಳಿಸಿ ಟೈ ಬೌಲಿಂಗ್ ನಲ್ಲಿ ಔಟಾದರು. ತಂಡದ ಮೊತ್ತ 146/5 ಆಗಿತ್ತು. ನಂತರ ಮನ್ದೀಪ್ 22ರನ್ ಗಳಿಸಿ ಜಯದ ಹೊಸ್ತಿಲಿಗೆ ತಂಡವನ್ನು ತಂದರು.
ವಾಷಿಂಗ್ಟನ್ ಸುಂದರ್ ಕೊನೆ ಓವರ್ ನಲ್ಲಿ ಇದ್ದ ಆತಂಕ ದೂರ ಮಾಡಿ ಗೆಲುವಿನ ರನ್ ಬಾರಿಸಿದರು. ಆರ್ ಅಶ್ವಿನ್ 2, ಮುಜೀಬ್, ಅಕ್ಷರ್, ಟೈ ತಲಾ 1 ವಿಕೆಟ್ ಪಡೆದರು. ಆರ್ ಸಿಬಿ ಪರ 23ಕ್ಕೆ 3 ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.