ಆತನಿಂದ ಮಾತ್ರ ಕಟ್ಟಿ ಹಾಕಲು ಸಾಧ್ಯ
ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರನ್ನು ಶೀಘ್ರವಾಗಿ ಕಟ್ಟಿ ಹಾಕಲು ಟೀಮ್ ಇಂಡಿಯಾ ಯಾವ ರೀತಿ ರಣತಂತ್ರವನ್ನು ಹೆಣೆಯಬೇಕೆಂದು ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಸಲಹೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಓರ್ವ ಬೌಲರ್ನಿಂದ ಮಾತ್ರವೇ ಜೋ ರೂಟ್ ಓಟವನ್ನು ಕಟ್ಟಿಹಾಕಲು ಸಾಧ್ಯ ಎಂದಿದ್ದಾರೆ ಮಾಂಟಿ ಪೆನೆಸರ್
ಯಾರು ಆ ಬೌಲರ್?
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಸೂಚಿಸಿದ ಟೀಮ್ ಇಂಡಿಯಾದ ಆ ಬೌಲರ್ ಬೇರೆ ಯಾರೂ ಅಲ್ಲ. ಅದು ವೇಗಿ ಜಸ್ಪ್ರೀತ್ ಬೂಮ್ರಾ. ಜೋ ರೂಟ್ ಅವರನ್ನು ಅಗ್ಗಕ್ಕೆ ಕಟ್ಟಿಹಾಕಬೇಕಾದರೆ ಬೂಮ್ರಾ ಅವರಿಂದ ಮಾತ್ರವೇ ಸಾಧ್ಯ ಎಂದಿದ್ದಾರೆ ಪೆನೆಸರ್. ಬೂಮ್ರಾ ಈ ಸರಣಿಯಲ್ಲಿ ಎರಡು ಬಾರಿ ಜೋ ರೂಟ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಣಿಯಲ್ಲಿ ಭಾರತದ ವಿರುದ್ಧ ಆಡಿರುವ ನಾಲ್ಕು ಇನ್ನಿಂಗ್ಸ್ನಲ್ಲಿ ಜೋ ರೂಟ್ ಬರೊಬ್ಬರಿ 386 ರನ್ಗಳನ್ನು ಗಳಿಸಿದ್ದಾರೆ.
ರೂಟ್ ಬಂದೊಡನೆ ಬೂಮ್ರಾಗೆ ಕೈಗೆ ಚೆಂಡು ನೀಡಲಿ
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಕ್ರೀಸ್ಗೆ ಇಳಿದ ಕೂಡಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಸ್ಪ್ರೀತ್ ಬೂಮ್ರಾಗೆ ಚೆಂಡನ್ನು ನೀಡಬೇಕು. ಮೊಹಮ್ಮಸ್ ಸಿರಾಜ್ ಕೂಡ ಜೋ ರೂಟ್ ವಿಕೆಟ್ ಪಡೆಯಲು ಸೂಕ್ತವಾಗಿರುವ ಬೌಲರ್ ಆಗಿದ್ದಾರೆ. ಈ ಇಬ್ಬರು ಬೌಲಿಂಗ್ ದಾಳಿ ನಡೆಸುವ ಮೂಲಕ ಜೋ ರೂಟ್ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬಹುದು. ಲಾರ್ಡ್ಸ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಇದೇ ತಂತ್ರವನ್ನು ಅನುಸರಿಸಿದ ಕಾರಣ ಇಂಗ್ಲೆಂಡ್ ನಾಯಕ ತನ್ನ ವಿಕೆಟ್ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ ಮಾಂಟಿ ಪೆನೆಸರ್.
ಒತ್ತಡಕ್ಕೆ ಸಿಲುಕಿಸಿ ವಿಕೆಟ್ ಪಡೆಯಬಹುದು
ಇಂಗ್ಲೆಂಡ್ ನಾಯಕ ಜೋ ರೂಟ್ ಒಮ್ಮೆ ಕ್ರೀಸ್ಗೆ ಕಚ್ಚಿ ನಿಂತರೆ ನಂತರ ಆತನ ಬ್ಯಾಟ್ನಿಂದ ಸರಾಗವಾಗಿ ರನ್ಗಳು ಹರಿದುಬರುತ್ತದೆ. ನಂತರ ಆತನನ್ನುಜ ಔಟ್ ಮಾಡುವುದು ಸುಲಭವಿಲ್ಲ ಎಂದು ಮಾಂಟಿ ಪೆನೆಸರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಟೀಮ್ ಇಂಡಿಯಾ ಬೌಲರ್ಗಳು ಜೋ ರೂಟ್ ತಮ್ಮ ಲಯವನ್ನು ಕಂಡುಕೊಳ್ಳದಂತೆ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ರೂಟ್ ತಮ್ಮ ಸ್ಥಾನದಲ್ಲಿ ಹಾಗೂ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ. ಅದನ್ನು ಭಾರತ ತಂಡ ಬಯಸುತ್ತದೆ. ಈ ಮೂಲಕ ಭಾರತ ತಂಡ ಜೋ ರೂಟ್ ವಿಕೆಟ್ ಪಡೆಯಲು ಸಾಧ್ಯವಾಗುತ್ತದೆ ಎಮದು ಮಾಂಟಿ ಪೆನೆಸರ್ ಹೇಳಿಕೆಯನ್ನು ನೀಡಿದ್ದಾರೆ.