
ವೆಲ್ಲಿಂಗ್ಟನ್, ಫೆಬ್ರವರಿ 3: ವೆಲ್ಲಿಂಗ್ಟನ್ನ ವೆಸ್ಟ್ಪ್ಯಾಕ್ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 3) ನಡೆದ ಭಾರತ-ನ್ಯೂಜಿಲ್ಯಾಂಡ್ ನಡುವಿನ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಗೆಲುವನ್ನಾಚರಿಸಿತು. ಏಕದಿನ ಸರಣಿಯನ್ನೂ 4-1ರಿಂದ ಜಯಿಸಿತು. ಆದರೆ ಕಿವೀಸ್ ಸೋಲಿಗೆ ಅದೇ ತಂಡದ ಆಟಗಾರರ ಯಡವಟ್ಟೂ ಕಾರಣವಾಗಿದೆ.
11ನೇ ಓವರ್ ಎಸೆಯಲು ಬಂದಿದ್ದ ಹಾರ್ದಿಕ್ ಪಾಂಡ್ಯ (10.2 ಓವರ್) ಎಸೆತಕ್ಕೆ ರಾಸ್ ಟೇಲರ್ ಎಲ್ಬಿಡಬ್ಲ್ಯೂ ಆದರು. ಟೇಲರ್ಗೆ ತಾನು ಔಟ್ ಅನ್ನೋದು ಪಕ್ಕಾ ಅನ್ನಿಸಿರಲಿಲ್ಲ. ಕ್ರೀಸ್ನ ಇನ್ನೊಂದು ಬದಿಯಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್ನು ಈ ಬಗ್ಗೆ ಕೇಳಿದರು. ವಿಲಿಯಮ್ಸ್ ಔಟ್ ಎಂಬಂತೆ ಸೂಚಿದರು. ರಾಸ್ ಮೈದಾನದಿಂದ ಹೊರ ನಡೆದು. ಇಲ್ಲೇ ಆಗಿದ್ದು ಯಡವಟ್ಟು!
ನಿಜವಾಗಿಯೂ ಟೇಲರ್ ಔಟೇ ಆಗಿರಲಿಲ್ಲ. ಚೆಂಡು ವಿಕೆಟ್ಗೆ ತಾಗುವ ಬದಲು ವಿಕೆಟ್ ಮೇಲುಗಡೆಯಿಂದ ಸರಿದು ಹೋಗುವುದರಲ್ಲಿತ್ತು. ಆದರೆ ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ ಅಂಪೈರ್ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್ಎಸ್) ಬಳಸದೆ ತಪ್ಪೆಸಗಿದ್ದರು. ನ್ಯೂಜಿಲ್ಯಾಂಡ್ಗೆ ಆಗ ಡಿಆರ್ಎಸ್ಗೆ ಅವಕಾಶ ಇತ್ತೂ ಕೂಡ!
ಅಂತೂ ರಾಸ್ ಟೇಲರ್ 1 ರನ್ನಿಗೆ ನಿರ್ಗಮಿಸಿದ್ದರಿಂದ ನ್ಯೂಜಿಲ್ಯಾಂಡ್ ಪರ ರನ್ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಜೇಮ್ಸ್ ನೀಶಮ್ 44 ರನ್ನೊಂದಿಗೆ ಕೊಂಚ ಹೋರಾಟ ನಡೆಸಿದರಾದರೂ ತಂಡಕ್ಕೆ ಗೆಲುವು ತಂದುಕೊಡುವುದು ಅವರಿಂದಾಗಲಿಲ್ಲ. ನ್ಯೂಜಿಲ್ಯಾಂಡ್ ಬೀಸುಗೈ ದಾಂಡಿಗ ರಾಸ್ ಟೇಲರ್ ಒಂದು ವೇಳೆ ಆಗ ಔಟ್ ಅನ್ನಿಸದಿದ್ದರೆ ಫಲಿತಾಂಶ ಕಿವೀಸ್ ಪರ ವಾಲಿದರೂ ಅದರಲ್ಲಿ ಅಚ್ಚರಿಯಿರಲಿಲ್ಲ.