

ಅಡಿಲೇಡ್, ಡಿಸೆಂಬರ್ 10: ಡಿಸೆಂಬರ್ 14ರಿಂದ ಪರ್ತ್ನಲ್ಲಿ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಆಟಗಾರರು ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಈ ಹೊತ್ತಿನಲ್ಲಿ ತಂಡಕ್ಕೆ ಅಭ್ಯಾಸಕ್ಕಿಂತಲೂ ವಿಶ್ರಾಂತಿ ಹೆಚ್ಚು ಅವಶ್ಯವಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಶತಕದ (123 ರನ್) ಮೂಲಕ ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದ ಚೇತೇಶ್ವರ ಪೂಜಾರ ಅವರನ್ನು ಮನತುಂಬಿ ಶ್ಲಾಘಿಸಿದ್ದ ಶಾಸ್ತ್ರಿ, ದ್ವಿತೀಯ ಟೆಸ್ಟ್ಗಿನ್ನು ಕೆಲವೇ ದಿನಗಳು ಬಾಕಿಯಿರುವುದರಿಂದ ತಂಡ ನೆಟ್ ಅಭ್ಯಾಸಕ್ಕಿಂತಲೂ ವಿಶ್ರಾಂತಿಯೆಡೆಗೆ ಗಮನ ಹರಿಸುವ ಅಗತ್ಯವಿದೆ ಎಂದು ಪಂದ್ಯದ ಅಧಿಕೃತ ಪ್ರಸಾರಕದೊಂದಿಗೆ ಮಾತನಾಡುತ್ತ ತಿಳಿಸಿದರು.
'ನಾವು ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಎದುರು 31 ರನ್ ಗಳಿಂದ ಸೋತಿದ್ದೆವು. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲೂ 60-70 ರನ್ ಹಿನ್ನಡೆ ಅನುಭವಿಸಿದ್ದೆವು. ಈ ಬಾರಿ ಗೆದ್ದಿದ್ದೇವೆ. ನಮಗೆ ಉತ್ತಮ ಆಟರಂಭ ಲಭಿಸಿದೆ. ಇದರಿಂದ ಸರಣಿ ಗೆಲುವಿನ ನಂಬಿಕೆ ಹೆಚ್ಚಾಗಿದೆ' ಎಂದು ರವಿ ಹೇಳಿದರು.
'ಮೊದಲ ಇನ್ನಿಂಗ್ಸ್ನಲ್ಲಿ ಕೆಲವರು ರ್ಯಾಶ್ ಶಾಟ್ಗಳಿಗೆ ಪ್ರಯತ್ನಿಸಿದರು. ಕ್ರಿಕೆಟ್ನಲ್ಲಿ ಇದು ಮೂರ್ಖತನದ್ದು. ಆದರೆ ಅದರಿಂದ ಪಾಠವೂ ಕಲಿತಿದ್ದಾರೆ. ಪೂಜಾರ ಮಾತ್ರ ಅದ್ಭುತ ಪ್ರದರ್ಶನ ನೀಡಿದರು. ಅವರು ಇನ್ನೂ ಕೊಂಚ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಿದೆ' ಎಂದು ಶಾಸ್ತ್ರಿ ವಿವರಿಸಿದರು. ಮೊದಲ ಟೆಸ್ಟ್ ನಲ್ಲಿ 31 ರನ್ ಜಯ ಸಾಧಿಸಿರುವ ಭಾರತ, ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.