
ನವದೆಹಲಿ, ಜುಲೈ 17: ಲಾರ್ಡ್ಸ್ ನಲ್ಲಿ ನಡೆದಿದ್ದ ಇಂಗ್ಲೆಂಡ್-ಭಾರತ ನಡುವಣ ದ್ವಿತೀಯ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 59 ಎಸೆತಗಳಿಗೆ 37 ರನ್ ಪೇರಿಸಿ ಅಭಿಮಾನಿಗಳ ಅಪಹಾಸ್ಯಕ್ಕೀಡಾಗಿದ್ದರು. ಧೋನಿಯ ಅಂದಿನ ಪರದಾಟ ನನ್ನ ಹಿಂದಿನ ಪರದಾಟದ ಕ್ಷಣವೊಂದನ್ನೂ ನೆನಪಿಸಿತು ಎಂದು ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಜುಲೈ 14ರಂದು ದ್ವೀತಿಯ ಏಕದಿನ ಪಂದ್ಯದಲ್ಲಿ ಧೋನಿ ದುರ್ಬಲ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಂದರ್ಭ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಧೋನಿಯನ್ನು ಸಮರ್ಥಿಸಿಕೊಂಡಿದ್ದರು.
ಧೋನಿ ಅಂದು ಅನುಭವಿಸಿದ್ದ ಸ್ಥಿತಿಯನ್ನು ತಾನು ಇದೇ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನಡೆದಿದ್ದ 1975ರ ವರ್ಲ್ಡ್ ಕಪ್ ಪಂದ್ಯದಲ್ಲಿ ಅನುಭವಿಸಿದ್ದೆ. ಅಂದು ನಾನು ಅಜೇಯ 36 ರನ್ ಬಾರಿಸಿ ಕುಖ್ಯಾತಿಗೀಡಾಗಿದ್ದೆ, ಅಪಹಾಸ್ಯವನ್ನನುಭವಿಸಿದ್ದೆ ಎಂದು ಗವಾಸ್ಕರ್ ದೈನಿಕವೊಂದಕ್ಕೆ ಬರೆದಿರುವ ಅಂಕಣದಲ್ಲಿತಿಳಿಸಿದ್ದಾರೆ.
'ಧೋನಿಯ ಅಂದಿನ ಪರದಾಟ ಕ್ರಿಕೆಟ್ ಬಲ್ಲವರಿಗೆ ಅರ್ಥವಾಗುತ್ತದೆ. ಯಾಕೆಂದರೆ ಪಂದ್ಯ ಗೆಲ್ಲುವ ಸುಳಿವೇ ಇಲ್ಲದಾಗ ಬ್ಯಾಟ್ಸ್ಮನ್ ಇಕ್ಕಟ್ಟಿಗೆ ಸಿಲುಕಿರುತ್ತಾನೆ. ಆಗ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ. ಬದಲಿಗೆ ಮನಸ್ಸು ನಕಾರಾತ್ಮಕ ಯೋಚನೆಗಳ ವಶಕ್ಕೊಳಗಾಗಿರುತ್ತೆ. ಇಂಥದ್ದೇ ಪರಿಸ್ಥಿತಿಯನ್ನು ನಾನು ಇದೇ ಮೈದಾನದಲ್ಲಿ, ಇದೇ ಇಂಗ್ಲೆಂಡ್ ಎದುರು ಅನುಭವಿಸಿದ್ದೆ' ಎಂದು ಸುನೀಲ್ ಹೇಳಿದರು.
ಆದರೆ ನಾಯಕ ಕೊಹ್ಲಿಯ ಮಾತನ್ನು ಪುನರುಚ್ಛರಿಸಿದ ಗವಾಸ್ಕರ್, 'ಟೀಮ್ ಇಂಡಿಯಾ ಇದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಂಡು ಅದೇ ಘಟನೆ ಸುತ್ತ ಗಿರಕಿ ಹೊಡೆಯುವ ಅಗತ್ಯವಿಲ್ಲ. ಬದಲಿಗೆ ಬೌಲಿಂಗ್, ಬ್ಯಾಟಿಂಗ್ ಮತ್ತು ಪಾರ್ಟ್ನರ್ ಶಿಪ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಷ್ಟೇ' ಎಂದರು.