ಭಾರತ ತಂಡದ ಅನುಭವಿ ಆಟಗಾರ ಮುರಳಿ ವಿಜಯ್ ಭಾರತ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಬಿಸಿಸಿಐ ಪದೇ ಪದೇ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೇಳಿರುವ ಅವರು, 30 ವರ್ಷ ದಾಟಿದ ನಂತರ ಕ್ರಿಕೆಟಿಗರನ್ನು 80 ವರ್ಷದವರಂತೆ ಕಾಣುತ್ತಾರೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದ ಮುರಳಿ ವಿಜಯ್ ಅದಾದ ನಂತರ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ವಿವಿಧ ದೇಶಗಳಲ್ಲಿ ನಡೆಯುವ ಲೀಗ್ಗಳಲ್ಲಿ ಆಡಲು ಅವಕಾಶ ಹುಡುಕುತ್ತಿರುವ ಅವರು ಶೀಘ್ರದಲ್ಲೇ ಬಿಸಿಸಿಐನಿಂದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ (NOC) ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತ vs ಶ್ರೀಲಂಕಾ: ಅಂತಿಮ ಏಕದಿನ ಪಂದ್ಯದಲ್ಲಿ ಸಿಗುತ್ತಾ ಸೂರ್ಯಕುಮಾರ್, ಇಶಾನ್ಗೆ ಸ್ಥಾನ
ದೇಶೀಯ ಕ್ರಿಕೆಟ್ನಲ್ಲಿ ಹಿರಿಯ ಆಟಗಾರರನ್ನು ಹೇಗೆ ನೋಡಲಾಗುತ್ತದೆ ಎನ್ನುವುದರ ಬಗ್ಗೆ ಮುರುಳಿ ವಿಜಯ್ ಮಾತನಾಡಿದ್ದಾರೆ. "ಬಿಸಿಸಿಐನ ಸಹವಾಸ ಸಾಕಾಗಿದೆ, ವಿದೇಶದಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದೇನೆ. ಇನ್ನೂ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಬಯಸುತ್ತೇನೆ. ಆಟಗಾರನಿಗೆ 30 ವರ್ಷ ದಾಟಿದರೆ, ಅವರನ್ನು ತಂಡಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನ ನಮ್ಮನ್ನು 80 ವರ್ಷದವರಂತೆ ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.
ನನಗಿನ್ನೂ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ
ಮುರಳಿ ವಿಜಯ್ಗೆ ಸದ್ಯ 38 ವರ್ಷ ವಯಸ್ಸಾಗಿದೆ. ಆದರೂ ನಾನು ಕ್ರಿಕೆಟ್ ಆಡಲು ಫಿಟ್ ಆಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಬೌಲರ್ ವಿರುದ್ಧ ರನ್ ಗಳಿಸುವ ಸಾಮರ್ಥ್ಯವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ವಿದೇಶಿ ಲೀಗ್ಗಳಲ್ಲಿ ಆಡುವುದು ಕಠಿಣ ನಿರ್ಧಾರ, ಆದರೆ ಇದನ್ನು ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.
"30 ವರ್ಷವಾಗಿದ್ದಾಗ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿರಬೇಕು ಎಂದು ಭಾವಿಸುತ್ತೀರಿ. ಆದರೆ, ನನಗೆ ಅವಕಾಶಗಳು ಕಡಿಮೆಯಾದವು. ನನಗೆ ಈಗ ಬೇರೆ ದಾರಿಯಿಲ್ಲ, ಭಾರತದಿಂದ ಹೊರಗೆ ಅವಕಾಶಗಳನ್ನು ಹುಡುಕಬೇಕಾಯಿತು. ನಮಗೆ ಏನು ಆಗುತ್ತದೋ ಅದನ್ನು ನಾವು ಮಾಡಬೇಕು, ನಮ್ಮಿಂದ ನಿಯಂತ್ರಿಸಲು ಸಾಧ್ಯವಾಗದ್ದನ್ನು ನಾವು ಏನೂ ಮಾಡಲು ಸಾಧ್ಯವಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
2013-2014ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ (SENA) ತಂಡಗಳ ವಿರುದ್ಧ ಭಾರತದ ಪರವಾಗಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದ್ದ ಆಟಗಾರ. 61 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿರುವ ಮುರಳಿ ವಿಜಯ್ 12 ಶತಕ ಸೇರಿ ಒಟ್ಟು 3982 ರನ್ ಗಳಿಸಿದ್ದಾರೆ.
ಮತ್ತೆ ಭಾರತ ತಂಡಕ್ಕೆ ಆಡಬೇಕು ಎನ್ನುವ ಅವರ ಬಯಕೆ ಈಡೇರದ ಕಾರಣ ವಿದೇಶಿ ಲೀಗ್ಗಳಲ್ಲಿ ಆಡಲು ಮುಂದಾಗಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ಹಿರಿಯ ಆಟಗಾರನಿಗೆ ವಿದೇಶದಲ್ಲಿ ಮಣೆ ಹಾಕುವರೇ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.