ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ ಅವರನ್ನು ಗುರುವಾರ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಬಿಸಿಸಿಐನ ಕ್ರಿಕೆಟ್ ಅಡ್ವೈಸರಿ ಕಮಿಟಿ ಚೇತನ್ ಶರ್ಮಾ ಜೊತೆಗೆ ಅಭಯ್ ಕರುವಿಲ್ಲ ಹಾಗೂ ದೆವಾಶಿಶ್ ಮೊಹಾಂತಿ ಅವರನ್ನು ಕೂಡ ಆಯ್ಕೆ ಸಮಿತಿಗೆ ಆಯ್ಕೆ ಮಾಡಿದೆ. ಈ ಆಯ್ಕೆಯ ಬಳಿಕ ಚೇತನ್ ನೂತನ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
"ಮತ್ತೊಮ್ಮೆ ಭಾರತೀಯ ಕ್ರಿಕೆಟ್ಗೆ ಸೇವೆಯನ್ನು ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ನಾನು ಹೆಚ್ಚು ಮಾತನಾಡದ ಮನುಷ್ಯ. ನನ್ನ ಕೆಲಸ ಮಾತಿಗಿಂತ ಜೋರಾಗಿ ಧ್ವನಿಸುತ್ತದೆ. " ಎಂದು ಚೇತನ್ ಶರ್ಮಾ ತಮ್ಮ ಆಯ್ಕೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಚೇತನ್ ಶರ್ಮಾ ಆಯ್ಕೆ
"ಈ ಸಂದರ್ಭದಲ್ಲಿ ನಾನು ಬಿಸಿಸಿಐಗೆ ಧನ್ಯವಾದವನ್ನು ಮಾತ್ರವೇ ಹೇಳುತ್ತೇನೆ" ಎಂದು ಚೇತನ್ ಶರ್ಮಾ ತಮ್ಮ ಆಯ್ಕೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಚೇತನ್ ಶರ್ಮಾ 1983ರಿಂದ 1994ರ ಅವಧಿಯಲ್ಲಿ 65 ಏಕದಿನ ಹಾಗೂ 23 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಚೇತನ್ ಶರ್ಮಾ ತಮ್ಮ 16ನೇ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಲು ಆರಂಭಿಸಿದ್ದರು. 18ನೇ ವಯಸ್ಸಿನಲ್ಲಿ ಚೇತನ್ ಶರ್ಮಾ ಹರ್ಯಾಣ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿ ಅದೇ ವರ್ಷದಲ್ಲಿ ಭಾರತ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿ ಪದಾರ್ಪಣೆ ಮಾಡಿದ್ದರು.
1983ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಚೇತನ್ ಶರ್ಮಾ ಏಕದಿನ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದರು. 1987ರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದು ಚೇತನ್ ಶರ್ಮಾ ಅವರ ಕ್ರಿಕೆಟ್ ಬದುಕಿನ ಸ್ಮರಣೀಯ ಅಂಶವಾಗಿದೆ.