
ಕೋಲ್ಕತ್ತಾ, ನವೆಂಬರ್ 23: ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ಭಾರತದ ಆಯ್ಕೆ ಸಮಿತಿ ಟೀಮ್ ಇಂಡಿಯಾದಿಂದ ಬಿಡುಗಡೆಗೊಳಿಸಿದೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಲು ಅನುಕೂಲವಾಗುವಂತೆ ಪಂತ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ.
ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಭಾರತ ನಿಯಮಿತ ಓವರ್ಗಳ ಸರಣಿಯನ್ನಾಡಲಿದೆ. ಹೀಗಾಗಿ ಪಂತ್ ಆಟದಲ್ಲಿ ತೊಡಗಿಕೊಂಡಿದ್ದು ಸರಣಿಗೆ ತಯಾರಾಗಲಿ ಎಂಬ ಯೋಜನೆಯೂ ಆಯ್ಕೆ ಸಮಿತಿಯದ್ದು. ವೆಸ್ಟ್ ಇಂಡೀಸ್ ಸರಣಿ ಡಿಸೆಂಬರ್ 6ರಿಂದ ಟಿ20 ಸರಣಿ ಮೂಲಕ ಆರಂಭಗೊಳ್ಳಲಿದೆ.
ಸದ್ಯ ನಡೆಯುತ್ತಿರುವ ಬಾಂಗ್ಲಾ vs ಭಾರತ ದ್ವಿತೀಯ ಟೆಸ್ಟ್ನಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಕವರ್ ಆಗಿ ಪಂತ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ ಈಗ ಪಂತ್ ಬಿಡುಗಡೆಗೊಳಿಸಿ ಆಂಧ್ರ ಕೀಪರ್-ಬ್ಯಾಟ್ಸ್ಮನ್ ಕೋನ ಶ್ರೀಕರ್ ಭರತ್ ಅವರನ್ನು ಸಹಾಗೆ ಕವರ್ ಆಗಿ ಆಯ್ಕೆ ಸಮಿತಿ ನೇಮಿಸಿದೆ.
'ರಿಷಬ್ ಪಂತ್, ವೆಸ್ಟ್ ಇಂಡೀಸ್ ವಿರುದ್ಧದ ಆರೂ (3 ಟಿ20, 3 ಏಕದಿನ) ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಡೆಲ್ಲಿ ಪರ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಂತ್ ಆಡಲಿ ಅಂತ ಆಯ್ಕೆಸಮಿತಿ ವಿವೇಕ ಮೆರೆದಿದೆ,' ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.
ಭಾರತ 'ಎ' ವಿರುದ್ಧದ ಆಡುವ ಭರತ್, ಕಳೆದೆರಡು ಸೀಸನ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಆಯ್ಕೆ ಸಮಿತಿ ಅವರನ್ನು ಬಾಂಗ್ಲಾ ವಿರುದ್ಧದ ಟೆಸ್ಟ್ಗೆ ಪರಿಗಣಿಸಿದೆ. 69 ಪ್ರಥಮದರ್ಜೆ ಪಂದ್ಯಗಳಲ್ಲಿ 3,909 ರನ್ ದಾಖಲೆ ಭರತ್ ಹೆಸರಿನಲ್ಲಿದೆ. ಇದರಲ್ಲಿ 8 ಶತಕ, 20 ಅರ್ಧ ಶತಕ, 1 ತ್ರಿಶತಕ ಸೇರಿದೆ.