
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಮುಂದೆ ನಿಂತು ತಂಡವನ್ನು ಮುನ್ನಡೆಸಲು ಉತ್ಸುಕರಾಗಿದ್ದಾರೆ ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ರೋಹಿತ್ ಶರ್ಮಾ ಕಳೆದ ಕೆಲ ಸಮಯಗಳಲ್ಲಿ ಮಹತ್ವದ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮವಾದ ಪ್ರದರ್ಶನ ನೀಡುವುದು ರೋಹಿತ್ ಶರ್ಮಾ ಮುಂದಿರುವ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ನಾಗ್ಪುರದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಭಾರತ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸಿದಂತಾಗಲಿದೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪೂರ್ಣ ಸಮಯದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರೋಹಿತ್ ಶರ್ಮಾ ಕೇವಲ 2 ಟೆಸ್ಟ್ಗ ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳನ್ನು ಗಾಯದ ಕಾರಣದಿಂದ ತಪ್ಪಿಸಿಕೊಂಡಿದ್ದಾರೆ.
ಆದರೆ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ಸಂಜಯ್ ಬಂಗಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಈ ಸರಣಿ ರೋಹಿತ್ ಶರ್ಮಾ ಪಾಲಿಒಗೆ ಅತ್ಯಂತ ಮಹತ್ವದ್ದು ಯಾಕೆಂದರೆ ಈ ಹಿಂದೆ ರೋಹಿತ್ ಅದ್ಭುತ ಲಯದಲ್ಲಿದ್ದಾಗ ಗಾಯದ ಕಾರಣಕ್ಕೆ 2015-2018ರವರೆಗೆ ದುರದೃಷ್ಟವಶಾತ್ ತಂಡದಿಂದ ಹೊರಗುಳಿಯಬೇಕಾಗುತ್ತಿತ್ತು. 2018ರಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಕೌಟುಂಬಿಕ ಕಾರಣಗಳಿಂದಾಗಿ ತವರಿಗೆ ವಾಪಾಸಾಗಬೇಕಾಗಿತ್ತು" ಎಂದಿದ್ದಾರೆ ಸಂಜಯ್ ಬಂಗಾರ್.
ಮುಂದುವರಿದು ಮಾತನಾಡಿರುವ ಬಂಗಾರ್ "ಆರಂಭಿಕ ಆಟಗಾರನಾಗಿ ಇಂಗ್ಲಿಷ್ ಕಂಡೀಶನ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ಆ ಸವಾಲಿನಲ್ಲಿ ಗೆಲುವು ಸಾಧಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿಯೂ ಎಂಥಾ ಅದ್ಭುತ ಸರಣಿಯನ್ನು ಹೊಂದಿದ್ದರು ಎಂಬುದನ್ನು ಕೂಡ ನಾವು ಕಂಡಿದ್ದೇವೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಬೇಕಿರುವುದು ಅವರ ಮುಂದಿನ ಕರ್ತವ್ಯ" ಎಂದಿದ್ದಾರೆ ಸಂಜಯ್ ಬಂಗಾರ್.
ಇನ್ನು ಇದೇ ಸಮದರ್ಭದಲ್ಲಿ ರೋಹಿತ್ ಶರ್ಮಾಗೆ ಸಂಜಯ್ ಬಂಗಾರ್ ಎಚ್ಚರಿಕೆಯೊಂದನ್ನು ಕೂಡ ನೀಡಿದ್ದಾರೆ. "ರೋಹಿತ್ ಹೊಸ ಚೆಂಡಿನಲ್ಲಿ ಆಡುವಾದ ಜಾಗರೂಕವಾಗಿದ್ದು ಸ್ಪಿನ್ನರ್ಗಳನ್ನು ಎದುರಿಸುವತ್ತ ಚಿತ್ತ ನೆಡಬೇಕಿದೆ" ಎಂದು ಬಂಗಾರ್ ಹೇಳಿದ್ದಾರೆ. ನಾಯಕ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಪ್ರಬಲ ವೇಗದ ಬೌಲಿಂಗ್ ಪಡೆಯೊಂದಿಗೆ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡಿದೆ.