ಸೆಪ್ಟೆಂಬರ್ 10ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿದೆ. ಮತ್ತೊಂದೆಡೆ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸೆಪ್ಟೆಂಬರ್ 10ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಘಟನೆಗಳ ಒಂದು ಕಿರುನೋಟ ಈ ಕೆಳಕಂಡಂತಿದೆ ನೋಡಿ..
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾಗಿದೆ ಆದರೆ ಸರಣಿ ಇಲ್ಲಿಗೇ ಮುಗಿದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಪಂದ್ಯ ಮತ್ತೆ ಮುಂದುವರೆಯಲಿರುವುದರ ಕುರಿತು ಸ್ಪಷ್ಟನೆಯನ್ನು ನೀಡಿದೆ. ಹೌದು, ಸದ್ಯ ಕೊರೋನಾವೈರಸ್ ಕಾರಣದಿಂದಾಗಿ ರದ್ದಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಭಾರತ ಸೀಮಿತ ಓವರ್ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತೀರ್ಮಾನವನ್ನು ಮಾಡಿದೆ. ಹೀಗಾಗಿ ಮುಂದಿನ ವರ್ಷ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ರದ್ದಾಗಿರುವ ಈ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.
* ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯ ರದ್ದಾಗಿರುವುದರಿಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಬರೋಬ್ಬರಿ 250 ಕೋಟಿ ನಷ್ಟವಾಗಿದೆ ಎಂದು ವರದಿಯಾಗಿದೆ. ಸರಣಿಯಲ್ಲಿ ಯಾರು ವಿಜೇತರಾಗಲಿದ್ದಾರೆ ಅಥವಾ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆಯಾ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಿದ್ದ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳು ಮೂಡಿದ್ದ ಕಾರಣ ಈ ಪಂದ್ಯ ರದ್ದಾಗಿರುವುದು ವ್ಯವಹಾರಿಕವಾಗಿಯೂ ಸಹ ನಷ್ಟ ಉಂಟಾಗಲು ಕಾರಣವಾಗಿದೆ.
* ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ರಶೀದ್ ಖಾನ್ ಸೇರಿದಂತೆ ಒಟ್ಟು 18 ಆಟಗಾರರ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ರಶೀದ್ ಖಾನ್ ಮನನೊಂದು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ. "ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ನಾಯಕನಾದ ನನ್ನನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಪರಿಗಣಿಸಬೇಕಿತ್ತು, ಆದರೆ ನನಗೆ ಯಾವುದೇ ಮಾಹಿತಿಯನ್ನು ನೀಡದೇ ಇಡೀ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಆಯ್ಕೆ ಮಾಡಿ ಘೋಷಣೆ ಮಾಡಿದ್ದು ಮನಸ್ಸಿಗೆ ಬೇಸರ ತಂದಿದೆ. ಹೀಗಾಗಿ ನಾನು ಅಫ್ಘಾನಿಸ್ತಾನ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ತಕ್ಷಣವೇ ಕೆಳಗಿಳಿಯುತ್ತಿದ್ದೇನೆ" ಎಂದು ಟ್ವೀಟ್ ಮಾಡುವ ಮೂಲಕ ರಶೀದ್ ಖಾನ್ ರಾಜೀನಾಮೆಯನ್ನು ಘೋಷಣೆ ಮಾಡಿದ್ದಾರೆ.
* ಟೀಮ್ ಇಂಡಿಯಾದ ವಿವಿಧ ಆಟಗಾರರ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಮಾರ್ಕ್ ವುಡ್ ಭಾರತದ ನಾಲ್ವರು ಪ್ರಮುಖ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ಚೇತೇಶ್ವರ್ ಪೂಜಾರಾಗೆ ಬೌಲಿಂಗ್ ಮಾಡುವುದು ತೀರಾ ಕಷ್ಟದ ಕೆಲಸ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ರೋಹಿತ್ ಶರ್ಮಾ ಅವರಿಗೆ ಎಂತಹ ಪರಿಸ್ಥಿತಿಯಲ್ಲಿಯೂ ಸಹ ಬೌಲಿಂಗ್ ಮಾಡುವುದು ತೀರಾ ಕಷ್ಟದ ಕೆಲಸ ಎಂದು ಮಾರ್ಕ್ ವುಡ್ ಹೇಳಿಕೆ ನೀಡಿದ್ದಾರೆ. ಇನ್ನು ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಕೆಎಲ್ ರಾಹುಲ್ ಕೂಡ ಜಾಣ್ಮೆಯ ಆಟವನ್ನಾಡುತ್ತಾರೆ, ಆರಂಭದಲ್ಲಿಯೇ ದೊಡ್ಡ ಹೊಡೆತಗಳಿಗೆ ಕೈ ಹಾಕದೇ ತುಂಬಾ ಜಾಗರೂಕತೆಯಿಂದ ಆಡುವ ಕೆಎಲ್ ರಾಹುಲ್ ಭಾರತ ತಂಡದ ಬಲಿಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಮಾರ್ಕ್ ವುಡ್ ಹೇಳಿದ್ದಾರೆ. ನಂತರ ಚೇತೇಶ್ವರ್ ಪೂಜಾರ ಕೂಡ ಟೀಮ್ ಇಂಡಿಯಾ ತಂಡದ ಬಲಿಷ್ಠ ಆಟಗಾರರಲ್ಲಿ ಓರ್ವರು, ಪೂಜಾರ ಮೈದಾನಕ್ಕೆ ಹೊಂದಿಕೊಂಡ ನಂತರ ಆತನ ವಿಕೆಟ್ ಪಡೆಯುವುದು ಸುಲಭದ ಮಾತಲ್ಲ ಎಂದು ಮಾರ್ಕ್ ವುಡ್ ಹೇಳಿದ್ದಾರೆ. ಕೊನೆಯದಾಗಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಮಾರ್ಕ್ ವುಡ್ ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿಯೇ ತಾನು ಎದುರಿಸಿರುವ ಕೆಲ ಕಠಿಣವಾದ ಬ್ಯಾಟ್ಸ್ಮನ್ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು ಎಂದು ಶ್ಲಾಘಿಸಿದ್ದಾರೆ.
* ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಶುಕ್ರವಾರ (ಸೆಪ್ಟೆಂಬರ್ 10) 15 ಜನರ ತಂಡ ಪ್ರಕಟಿಸಿದೆ. ದಸುನ್ ಶನಕ ತಂಡದ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಟಿ20 ವಿಶ್ವಕಪ್ಗೆ ಶ್ರೀಲಂಕಾದ 15 ಜನರ ತಂಡ: ಕುಸಾಲ್ ಪೆರೆರಾ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾ, ದಸನು ಶನಕ (ನಾಯಕ), ಚರಿತ್ ಅಸಲಂಕ, ವನಿಂದು ಹಸರಂಗ, ಚಮಿಕ ಕರುಣರತ್ನೆ, ಅಕಿಲ ದನಂಜಯ, ಮಹೇಶ್ ತೀಕ್ಷಣ, ದಿನೇಶ್ ಚಾಂಡಿಮಾಲ್, ಕಮಿಂದು ಮೆಂಡಿಸ್, ಬಿನುರ ಫೆರ್ನಾಂಡೊ, ಪ್ರವೀಣ್ ಜಯವಿಕ್ರಮ, ದುಶ್ಮಂತ ಚಮೀರ.