ಸೆಪ್ಟೆಂಬರ್ 8 ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ ವಿಶ್ವಕಪ್ 15 ಜನರ ತಂಡದಲ್ಲಿ ಎಂದಿನ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ ಹಾಗೂ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ಮಾರ್ಗದರ್ಶಕರಾಗಿ ತಂಡದ ಜೊತೆಗಿರಲಿದ್ದರೆ, ಇನ್ನೊಂದೆಡೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಹೀಗೆ ಸೆಪ್ಟೆಂಬರ್ 8 ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ.
* ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಮತ್ತು ಪಂದ್ಯ ನಡೆಯುವ ವೇಳೆ ಟೀಮ್ ಇಂಡಿಯಾ ವಿರುದ್ಧ ಕಳಪೆಯಾಗಿ ಟೀಕೆಗಳನ್ನು ವ್ಯಕ್ತಪಡಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್ ಪಂದ್ಯ ಮುಗಿದ ನಂತರ ತಾವು ಟೀಮ್ ಇಂಡಿಯಾ ಕುರಿತು ವ್ಯಕ್ತಪಡಿಸಿದ ಟೀಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ತಪ್ಪು ತಿಳಿದಿದ್ದೆ, ಉತ್ತಮ ಪರಿಶ್ರಮ ಮತ್ತು ಗೆಲ್ಲುವ ಹಠದೊಂದಿಗೆ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನವನ್ನು ತೋರಿತು ಎಂದು ನಿಕ್ ಕಾಂಪ್ಟನ್ ಹೇಳಿದ್ದಾರೆ.
* ಜೋ ರೂಟ್ ಪಡೆ ಮುಂಬರಲಿರುವ ಆ್ಯಷಸ್ ಸರಣಿಯ ಕಡೆಗೆ ಹೆಚ್ಚು ಗಮನ ಹರಿಸಿ ಸದ್ಯ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಕಡೆ ಅಲಕ್ಷ್ಯ ತೋರಿತು. ಇದೇ ಕಾರಣಕ್ಕೆ ಭಾರತ ವಿರುದ್ಧ ಇಂಗ್ಲೆಂಡ್ ಸರಣಿ ಹಿನ್ನಡೆಯಲ್ಲಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಗವಾಸ್ಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!
* ಕೋವಿಡ್-19 ಭೀತಿಯ ನಡುವೆಯೇ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳು ನಡೆಯಲಿರುವುದರಿಂದ ಬಿಸಿಸಿಐ ಮುನ್ನೆಚ್ಚರಿಕೆಯಾಗಿ ಸುಮಾರು 30,000 ಆರ್ಟಿ-ಪಿಸಿಆರ್ ಪರೀಕ್ಷೆಗಳ ನಡೆಸಲು ಯೋಚಿಸಿದೆ. ಎಲ್ಲಾ ಐಪಿಎಲ್ ಆಟಗಾರರು, ಬೆಂಬಲ ಸಿಬ್ಬಂದಿ, ಮಧ್ಯಸ್ಥಗಾರರು ಎಲ್ಲರಿಗೂ ಸೇರಿ ಸುಮಾರು 30,000 ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
* ವಿಶ್ವಕಪ್ 15 ಜನರ ತಂಡದಲ್ಲಿ ಎಂದಿನ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ಮಾರ್ಗದರ್ಶಕರಾಗಿ ತಂಡದ ಜೊತೆಗಿದ್ದು ಬಲ ತುಂಬಲಿದ್ದಾರೆ. 2007ರ ವಿಶ್ವಕಪ್ ವಿಜೇತ ತಂಡಕ್ಕೆ ನಾಯಕರಾಗಿದ್ದ ಧೋನಿ ಮಹತ್ವವನ್ನರಿತು ಅವರನ್ನು ತಂಡಕ್ಕೆ ಮೆಂಟರ್ ಆಗಿ ಆರಿಸಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ನೀಡಿದೆ.
* ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ತಂಡದಲ್ಲಿ ಯಾರಿಗೆಲ್ಲಾ ಅವಕಾಶ ದೊರೆಯಲಿದೆ ಎಂಬ ಕಾತರಕ್ಕೆ ಉತ್ತರ ದೊರೆತಿದೆ. ಟೀಮ್ ಇಂಡಿಯಾದ ಆಯ್ಕೆ ಸಮಿತಿ ಬಲಿಷ್ಠ ಭಾರತ ತಂಡದ ಆಟಗಾರರನ್ನು ಘೋಷಣೆ ಮಾಡಿದ್ದು ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.
* ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 8) ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ 4ನೇ ಟಿ20ಐ ಪಂದ್ಯದಲ್ಲಿ ಬಾಂಗ್ಲಾ 6 ವಿಕೆಟ್ ಸುಲಭ ಜಯ ಗಳಿಸಿದೆ. ಬೌಲಿಂಗ್ ಆಲ್ ರೌಂಡರ್ ನಸುಮ್ ಅಹ್ಮದ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾ ತಂಡ ಪಂದ್ಯ ಗೆದ್ದು ಐದು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ 3-1ರ ಮುನ್ನಡೆಯಲ್ಲಿದೆ.