ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್

ಲಂಡನ್, ಜೂನ್ 15: ವಿಶ್ವಕಪ್ನ ಅತ್ಯಂತ ರೋಮಾಂಚಕ ಹಣಾಹಣಿ ಎಂದೇ ಪರಿಗಣಿಸಲಾಗಿರುವ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯ ಭಾನುವಾರ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶ್ವಕಪ್ನಲ್ಲಿ ಇದುವರೆಗೂ ಪಾಕಿಸ್ತಾನವನ್ನು ಎದುರಿಸಿದ ಎಲ್ಲ ಆರೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ಭಾರತ ಏಳನೇ ಬಾರಿಗೆ ಗೆದ್ದು ಪಾಕಿಸ್ತಾನಕ್ಕೆ ಮತ್ತೆ ಮಣ್ಣುಮುಕ್ಕಿಸುವ ಉತ್ಸಾಹದಲ್ಲಿದೆ. ಬಹುತೇಕ ಕ್ರಿಕೆಟ್ ತಜ್ಞರ ಆಯ್ಕೆಯೂ ಭಾರತದ ಪರವಾಗಿದೆ.
ಆದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಈಗಾಗಲೇ ಗೆಲ್ಲುವ ತಂಡವನ್ನು ಪ್ರಕಟಿಸಿದ್ದಾರೆ.
ಟ್ವಿಟ್ಟರ್ನಲ್ಲಿ ತಮಾಷೆಯ ಮೀಮ್ ಟ್ವೀಟ್ ಮಾಡಿರುವ ಶೋಯೆಬ್ ಅಖ್ತರ್, ಭಾರತ-ಪಾಕಿಸ್ತಾನಗಳ ಪಂದ್ಯದಲ್ಲಿ ಗೆಲ್ಲುವುದು ಮಳೆ ಎಂದು ಹೇಳಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ತಂಡಗಳಿಗಿಂತ ಮಳೆಯೇ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಕ್ರಿಕೆಟ್ ಪ್ರಿಯರಿಗೆ ನಿರಾಶೆಯಾಗಿದೆ. ಭಾನುವಾರದ ಭಾರತ-ಪಾಕ್ ಕದನವನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳ ಆಸೆಯೂ ಮಳೆರಾಯ ತಣ್ಣೀರೆರಚುವುದು ಖಚಿತ ಎನ್ನಲಾಗಿದೆ.

ಈಜಲಿರುವ ಕೊಹ್ಲಿ-ಸರ್ಫರಾಜ್
ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಸರ್ಫರಾಜ್ ಅಹಮದ್ ಟಾಸ್ ನಡೆದ ಬಳಿಕ ಮೈದಾನದಲ್ಲಿ ತುಂಬಿಕೊಂಡಿರುವ ಮಳೆ ನೀರಿನಲ್ಲಿ ಈಜಿಕೊಂಡು ಸಾಗುತ್ತಿರುವುದು ಮತ್ತು ಕ್ರಿಕೆಟ್ ಪರಿಣತರು ದೋಣಿಯೊಂದರ ಮೇಲೆ ನಿಂತುಕೊಂಡು ವಿಶ್ಲೇಷಣೆ ಮಾಡುತ್ತಿರುವ ನಗೆಯುಕ್ಕಿಸುವ ಮೀಮ್ ಅನ್ನು ಅಖ್ತರ್ ಹಂಚಿಕೊಂಡಿದ್ದಾರೆ.
ಭಾನುವಾರದ ಪರಿಸ್ಥಿತಿ ಇದೇ ರೀತಿ ಇರಬಹುದು ಎಂದು ಅಖ್ತರ್ ಹೇಳಿದ್ದಾರೆ. ಈ ತಮಾಷೆಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಅಖ್ತರ್ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.

ಪಾಕ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ
ಹವಾಮಾನ ವರದಿಗಳ ಪ್ರಕಾರ ಮ್ಯಾಂಚೆಸ್ಟರ್ನಲ್ಲಿ ಭಾನುವಾರ ನಡೆಯಬೇಕಿರುವ ಪಂದ್ಯದಲ್ಲಿ ಮಳೆಯದ್ದೇ ಆಟವಾಗಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಪಂದ್ಯದ ಎರಡನೆಯ ಅವಧಿಯಲ್ಲಿ ಹಗುರವಾದ ಮಳೆಯಾಗಲಿದೆ ಎಂದು ಹೇಳಲಾಗಿದೆ. ಶನಿವಾರ ಈ ಭಾಗದಲ್ಲಿ ಭಾರಿ ಮಳೆಯಾಗಿದೆ. ಭಾನುವಾರ ಬೆಳಿಗಿನಿಂದಲೂ ತುಂತುರು ಮಳೆ ಇರಲಿದೆ. ಬಳಿಕ ಮೋಡದ ಮರೆಯಿಂದ ಸೂರ್ಯ ಹೊರಬಂದು ಆಟ ಆರಂಭಿಸಲು ಅನುವು ಮಾಡಿಕೊಡಲಿದ್ದಾರೆ. ಆದರೆ ಮಧ್ಯಾಹ್ನದ ಬಳಿಕ ಎರಡನೆಯ ಅವಧಿಯ ಆಟಕ್ಕೆ ಮಳೆರಾಯ ಕಾಟ ಕೊಡಲಿದ್ದಾನೆ.
ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಸಹಾಯ ಮಾಡ್ತಿದ್ದಾರೆ: ಪಾಕ್ ನಾಯಕನ ಅಳಲು

ಐಸಿಸಿ ವಿರುದ್ಧ ಆಕ್ರೋಶ
ಐಸಿಸಿ ವಿಶ್ವಕಪ್ನಲ್ಲಿ ಮಳೆಯೇ ಹೆಚ್ಚು ಅಬ್ಬರಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ನ್ಯೂಜಿಲೆಂಡ್ ವಿರುದ್ಧ ಆಡಬೇಕಿದ್ದ ಭಾರತದ ಮೂರನೇ ಪಂದ್ಯ ಕೂಡ ಟಾಸ್ ನಡೆಯದೆಯೇ ರದ್ದುಗೊಂಡಿತ್ತು. ಒಂದೂ ಎಸೆತಗಳು ನಡೆಯದೆ ಪಂದ್ಯ ರದ್ದಾಗುತ್ತಿರುವುದರಿಂದ ಮೀಸಲು ದಿನ ಇರಿಸದೆ ಟೂರ್ನಿ ನಡೆಸುತ್ತಿರುವುದಕ್ಕೆ ಐಸಿಸಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲು ದಿನ ಇರಿಸುವುದು ಕಷ್ಟ
ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸುವುದು ತಾರ್ಕಿಕವಾಗಿ ಕಷ್ಟಕರ. ಪ್ರತಿ ಪಂದ್ಯಕ್ಕೂ ಮೀಸಲು ದಿನವನ್ನು ಇರಿಸುವುದು ಟೂರ್ನಿಯ ಅವಧಿಯನ್ನು ಇನ್ನಷ್ಟು ಸುದೀರ್ಘವನ್ನಾಗಿಸುತ್ತದೆ. ಅದನ್ನು ನಿಭಾಯಿಸುವುದು ಕಷ್ಟ. ಪಿಚ್ ಸಿದ್ಧತೆ, ತಂಡದ ಸುಧಾರಣೆ ಮತ್ತು ಪ್ರವಾಸದ ದಿನಗಳ ಹೊಂದಾಣಿಕೆ, ವಸತಿ ವ್ಯವಸ್ಥೆ, ಸ್ಥಳಾವಕಾಶದ ಲಭ್ಯತೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ಲಭ್ಯತೆ, ಟೆಲಿವಿಷನ್ ಪ್ರಸಾರದ ಒಪ್ಪಂದ ಮತ್ತು ಪ್ರೇಕ್ಷಕರ ಅನುಕೂಲತೆ ಇವೆಲ್ಲವನ್ನೂ ಗಮನಿಸಬೇಕು. ಇಷ್ಟೆಲ್ಲ ಸಿದ್ಧಪಡಿಸಿದರೂ ಮೀಸಲು ದಿನದಲ್ಲಿಯೂ ಮಳೆ ಬರುವುದಿಲ್ಲ ಎಂಬ ಖಾತರಿಯಂತೂ ಇರುವುದಿಲ್ಲ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ಸನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications