
ದುಬೈ, ಜೂನ್ 27: ಭಾರತದ ಪುರುಷರ ಕಬಡ್ಡಿ ತಂಡ ಮಂಗಳವಾರದ ಔಪಚಾರಿಕ ಪಂದ್ಯದಲ್ಲಿ ಕೆನ್ಯಾ ತಂಡವನ್ನು ಮಣಿಸಿತು.
ಪಾಕಿಸ್ತಾನವನ್ನು ಮಣಿಸಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ, ಸೆಮಿಫೈನಲ್ನಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ತಂಡವನ್ನು ಎದುರಿಸಲಿದೆ.
ಗ್ರೂಪ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತವು ಕೆನ್ಯಾವನ್ನು 50-15ರ ಭಾರಿ ಅಂತರದಿಂದ ಸುಲಭವಾಗಿ ಸೋಲಿಸಿತು. ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತವು ಗುಂಪಿನಲ್ಲಿ ತನ್ನ ಮೊದಲ ಸ್ಥಾನವನ್ನು ಬಲಪಡಿಸಿಕೊಂಡಿತು.
'ಎ' ಗುಂಪಿನಲ್ಲಿ ಎರಡನೆಯ ಸ್ಥಾನಕ್ಕಾಗಿ ಕೆನ್ಯಾ ಮತ್ತು ಪಾಕಿಸ್ತಾನ ತಂಡಗಳು ಬುಧವಾರ ಸೆಣಸಾಡಲಿವೆ. ಮತ್ತೊಂದು ಪಂದ್ಯದಲ್ಲಿ ಇರಾನ್, ಅರ್ಜೆಂಟೀನಾ ತಂಡವನ್ನು ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು.
ಪಾಕಿಸ್ತಾನದ ವಿರುದ್ಧ ಗೆದ್ದಾಗಲೇ ಸೆಮಿಫೈನಲ್ಗೆ ತಲುಪಿದ್ದ ಭಾರತಕ್ಕೆ ಕೆನ್ಯಾ ವಿರುದ್ಧದ ಪಂದ್ಯ ಮಹತ್ವದ್ದಾಗಿರಲಿಲ್ಲ. ಹೀಗಾಗಿ ಪ್ರಮುಖ ಆಟಗಾರರಾದ ದೀಪಕ್ ನಿವಾಸ್ ಹೂಡಾ ಮತ್ತು ಮೋನು ಗೊಯಟ್ ಅವರ ಬದಲು ಪರ್ದೀಪ್ ನರ್ವಾಲ್ ಮತ್ತು ಸುರೇಂದರ್ ನಾಡಾ ಅವಕಾಶ ಪಡೆದುಕೊಂಡಿದ್ದರು.
ಟಾಸ್ ಗೆದ್ದ ನಾಯಕ ಅಜಯ್ ಠಾಕೂರ್, ಕೆನ್ಯಾ ತಂಡಕ್ಕೆ ಮೊದಲ ರೇಡ್ ಅವಕಾಶ ನೀಡಿದರು. ಮೊದಲ ಐದು ನಿಮಿಷದಲ್ಲಿಯೇ 12 ಅಂಕಗಳನ್ನು ಪಡೆದುಕೊಂಡ ಭಾರತ, ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು.
ಅರ್ಧ ಸಮಯ ಕಳೆಯುವ ವೇಳೆಗೆ ಭಾರತದ ಖಾತೆಯಲ್ಲಿ 29 ಅಂಕವಿದ್ದರೆ, ಕೆನ್ಯಾ ಕೇವಲ 5 ಅಂಕ ಪಡೆದಿತ್ತು. ಕೆಲ ಹೊತ್ತಿನಲ್ಲೇ ಕೆನ್ಯಾ ಆಲ್ಔಟ್ ಆಯಿತು. ಭಾರತ 36-5ರ ಮುನ್ನಡೆ ಸಾಧಿಸಿತ್ತು.
ಕೊನೆಯ 30 ಸೆಕೆಂಡ್ಗಳ ಆಟ ಬಾಕಿ ಇರುವಾಗ ರಾಹುಲ್ ಚೌಧರಿ ಭಾರತಕ್ಕೆ ಬೋನಸ್ ಪಾಯಿಂಟ್ ತಂದುಕೊಟ್ಟರು. ಸುರ್ಜೀತ್ ಸಿಂಗ್ ಸೂಪರ್ ರೇಡ್ನಲ್ಲಿ 2 ಪಾಯಿಂಟ್ ಗಳಿಸಿ 35 ಪಾಯಿಂಟ್ಗಳ ಅಂತರದ ಭರ್ಜರಿ ಗೆಲುವು ತಂದಿತ್ತರು.