
ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದ್ಭುತ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಸರಣಿಯ ಅಂತಿಮ ಪಂದ್ಯದಲ್ಲಿ ಸಿಡಿಸಿದ ಸ್ಪೋಟಕ ಶತಕದಿಂದಾಗಿ ಈ ವರ್ಷದ ಮೊದಲ ದ್ವಿಪಕ್ಷೀಯ ಸರಣಿಯನ್ನು ಭಾರತ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೀಗ ಟೀಮ್ ಇಂಡಿಯಾ ಏಕದಿನ ಸರಣಿಗೆ ಸಿದ್ಧವಾಗಿದ್ದು ರೋಹಿತ್ ಶರ್ಮಾ ನೇತೃತ್ವದಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದ ಟೀಮ್ ಇಂಡಿಯಾ ಪಡೆಗೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಸಲಹೆಯೊಂದನ್ನು ನೀಡಿದ್ದಾರೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಮ್ಯಾನೇಜ್ಮೆಂಟ್ ಹೆಚ್ಚಿನ ಪ್ರಮಾಣದಲ್ಲಿ ಆಲ್ರೌಂಡರ್ಗಳನ್ನು ತಂಡಕ್ಕೆ ಸೇರ್ಪಡೆಗೊಳಿಸುವತ್ತ ಚಿತ್ತ ನೆಡಬೇಕು ಎಂದಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಚಾಂಪಿಯನ್ ಎಂದಿರುವ ಜಡೇಜಾ, ಭಾರತ ತಂಡ ಮತ್ತೊಮ್ಮೆ ಹೆಚ್ಚಿನ ಆಲ್ರೌಂಡರ್ಗಳನ್ನು ಸೇರಿಸಿಕೊಳ್ಳುವ ರಣತಂತ್ರವನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.
ಆಡುವ ಬಳಗದಲ್ಲಿ ನಿಮ್ಮ ತಂಡದಲ್ಲಿರುವ ನಾಲ್ಬರು ಆಲ್ರೌಂಡರ್ಗಳನ್ನು ಕೂಡ ಸೇರಿಸಿಕೊಳ್ಳಬೇಕು. ಹಾರ್ದಿಕ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಈ ಎಲ್ಲರನ್ನು ಕೂಡ ನೀವು ಆಡಿದಬಹುದು. ಆಡಿಸಿದರೆ ತಪ್ಪೇನಾಗಲಿದೆ? ಯಾಕೆಂದರೆ ಇವರೆಲ್ಲರೂ ಬ್ಯಾಟಿಂಗ್ ಉತ್ತಮವಾಗಿ ಮಾಡಬಲ್ಲರು ಎಂದು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಜಡೇಜಾ ಹೆಚ್ಚಿನ ಆಲ್ರೌಂಡರ್ಗಳನ್ನು ಬಳಸಿಕೊಂಡರೆ ಆಗಬಹುದಾದ ಸಮಸ್ಯೆಯ ಬಗ್ಗೆಯೂ ಬೊಟ್ಟುಮಾಡಿದ್ದಾರೆ. ಈ ರಣತಂತ್ರವನ್ನು ಬಳಸಿಕೊಂಡರೆ ಬೌಲಿಂಗ್ ವಿಭಾಗ ದುರ್ಬಲ ಎನಿಸುವ ಸಾಧ್ಯತೆಯೂ ಇದೆ ಎಂದಿದ್ದಾರೆ ಅಜಯ್ ಜಡೇಜಾ.
"ಇದು ಹಾಗೆಯೇ ಒಂದು ಯೋಚನೆಯಷ್ಟೆ. ನೀವು ಇದಕ್ಕೆ ಬೇಕಾದರೆ ಮತ್ತೋರ್ವ ಆಲ್ರೌಂಡರ್ನನ್ನು ಸೇರಿಸಿಕೊಳ್ಳಬಹುದು. ಬೌಲಿಂಗ್ ಆಲ್ರೌಂಡರ್ ಆರ್ಅಶ್ವಿನ್ ರೀತಿಯ ಆಟಗಾರರು ಆದರೆ ನೀವು ಅಗ್ರ ಕ್ರಮಾಂಕದಲ್ಲಿ ಐದರಿಂದ ಆರು ಮಂದಿ ಬ್ಯಾಟರ್ಗಳನ್ನು ಹೊಂದಿರಲೇಬೇಕಾಗುತ್ತದೆ. ಬಳಿಕ ಈ ಆಲ್ರೌಂಡರ್ಗಳನ್ನು ಸೇರಿಸಿದರೆ ಬೌಲಿಂಗ್ ವಿಭಾಗ ದುರ್ಬಲ ಎನಿಸುವ ಸಾಧ್ಯತೆಯಿದೆ" ಎಂದು ಅಜಯ್ ಜಡೇಜಾ ಪ್ರತಿಕ್ರಿಯೆ ನೀಡಿದ್ದಾರೆ.