

ನವದೆಹಲಿ, ಫೆಬ್ರವರಿ 03: ವಿಶ್ವಕಪ್ ಗೆದ್ದ ಭಾರತ ಅಂಡರ್19 ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಭರ್ಜರಿ ಉಡುಗೊರೆ ಘೋಷಿಸಿದೆ.
ವಿಶ್ವಕಪ್ ಗೆದ್ದ ಭಾರತದ ಕಿರಿಯರ ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂಪಾಯಿ ಹಣವನ್ನು ಬಹುಮಾನವಾಗಿ ಬಿಸಿಸಿಐ ನೀಡುತ್ತಿದೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ತಂಡವನ್ನು ತಿದ್ದಿ ತೀಡಿ ವಿಶ್ವಕಪ್ ಜಯಗಳಿಸುವಂತೆ ಮಾಡಿದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ 50 ಲಕ್ಷ ಬಹುಮಾನವನ್ನು ಘೋಷಿಸಿದೆ. ಹೆಚ್ಚು ಮೊತ್ತವನ್ನು ರಾಹುಲ್ ಅವರಿಗೆ ಉಡುಗೊರೆಯಾಗಿ ನೀಡುತ್ತಿರುವ ಬಿಸಿಸಿಐ ರಾಹುಲ್ ಅವರ ಶ್ರಮವನ್ನು ಅರಿತಿದೆ.
ಅಂಡರ್19 ತಂಡದ ಬೆನ್ನ ಹಿಂದೆ ನಿಂತು ಅವರಿಗೆ ಎಲ್ಲಾ ವಿಭಾಗಗಳಲ್ಲೂ ಬೆಂಬಲ ನೀಡಿದ ಅಂಡರ್19 ಕ್ರಿಕೆಟ್ ತಂಡದ ತಂತ್ರಜ್ಞಾನ, ಫಿಸಿಯೊ ಇನ್ನೂ ಹಲವು ವಿಭಾಗದ ಬೆಂಬಲ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದೆ.