ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ (ನ. 23) ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಟೀಂ ಇಂಡಿಯಾ ಆಟಗಾರರ ಡಯಟ್ ಪ್ಲಾನ್ ಜೊತೆಗೆ ಹಲಾಲ್ ಮಾಂಸ ಸೇವನೆ ಕಡ್ಡಾಯದ ಕುರಿತು ಬಿಸಿಸಿಐ ಖಂಜಾಜಿ ಸುದ್ದಿಯು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಭಾರತ ತಂಡವನ್ನು ನಿರ್ದಿಷ್ಟ ಆಹಾರ ಯೋಜನೆಯೊಂದಿಗೆ ನಿರ್ದೇಶಿಸಲಾಗಿದೆ ಎಂದು ವರದಿಗಳು ಹರಿದಾಡಿದ್ದವು. ಹಲಾಲ್ ಮಾಂಸವನ್ನು ಮಾತ್ರ ತಿನ್ನುವಂತೆ ಮತ್ತು ಗೋಮಾಂಸ, ಹಂದಿಮಾಂಸವನ್ನು ಸೇವನೆ ಮಾಡಬಾರದೆಂದು ಬಿಸಿಸಿಐ ನಿರ್ದೇಶಿಸಿದೆ ಎಂದು ಸುದ್ದಿಯಾಗಿತ್ತು. ಆದರೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅಂತಹ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ.
ಟೀಂ ಇಂಡಿಯಾ ಆಟಗಾರರು ಏನು ತಿನ್ನಬೇಕು ಎಂಬುದನ್ನ ನಿರ್ಧರಿಸುವಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯು ಯಾವುದೇ ಪಾತ್ರವನ್ನ ಹೊಂದಿಲ್ಲ ಎಂದು ಧುಮಾಲ್ ಹೇಳಿದ್ದರೆ. ಇನ್ನು ಆಹಾರದ ಯೋಜನೆಯನ್ನು ಎಂದಿಗೂ ಚರ್ಚಿಸಿಲ್ಲ ಮತ್ತು ಅವರು ಏನು ತಿನ್ನುತ್ತಾರೆ ಎಂಬುದನ್ನ ನಿರ್ಧರಿಸಲು ಅದು ಆಟಗಾರರ ವೈಯಕ್ತಿಕ ಆಯ್ಕೆಯಾಗಿದೆ ಎಂದಿದ್ದಾರೆ.
''ಈ (ಆಹಾರ ಯೋಜನೆ) ಎಂದಿಗೂ ಚರ್ಚಿಸಲಾಗಿಲ್ಲ ಮತ್ತು ಜಾರಿಗೊಳಿಸಲಾಗುವುದಿಲ್ಲ. ಈ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ತಿಳಿದಿರುವಂತೆ, ಆಹಾರ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಮಾರ್ಗಸೂಚಿಗಳನ್ನು ನಾವು ಎಂದಿಗೂ ನೀಡಿಲ್ಲ. ಆಹಾರ ಪದ್ಧತಿಗೆ ಸಂಬಂಧಿಸಿದಂತೆ, ಇದು ಆಟಗಾರರ ವೈಯಕ್ತಿಕ ಆಯ್ಕೆಯಾಗಿದೆ, ಅದರಲ್ಲಿ ಬಿಸಿಸಿಐ ಯಾವುದೇ ಪಾತ್ರವನ್ನು ಹೊಂದಿಲ್ಲ'' ಎಂದು ಧುಮಾಲ್ ಹೇಳಿಕೆಯನ್ನ ಇಂಡಿಯಾ ಟುಡೇ ಉಲ್ಲೇಖಿಸಿದೆ.
ಇತ್ತೀಚಿನ ವರದಿಗಳ ಬಗ್ಗೆ ಮತ್ತಷ್ಟು ಮಾತನಾಡಿದ ಧುಮಾಲ್, 'ಹಲಾಲ್' ವಿಷಯವು ಆಟಗಾರನ ಪ್ರತಿಕ್ರಿಯೆಯ ಮೇಲೆ ಮಾತ್ರ ಸಂಭವಿಸಿರಬಹುದು ಅಥವಾ ಕೆಲವು ವಿದೇಶಿ ತಂಡಗಳು ಅವರ ಆಹಾರವನ್ನು ಮಿಶ್ರಣ ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, 'ಹಲಾಲ್' ವಿಷಯವನ್ನು ಇದುವರೆಗೆ ಬಿಸಿಸಿಐ ಗಮನಕ್ಕೆ ತಂದಿಲ್ಲ. ಬಿಸಿಸಿಐ ತನ್ನ ಆಟಗಾರರಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಎಂದಿಗೂ ಸಲಹೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಿದ ಬಿಸಿಸಿಐ! ನೆಟ್ಟಿಗರಿಂದ ತೀವ್ರ ಟೀಕೆ
ನಿನ್ನೆ ಆಟಗಾರರ ಡಯಟ್ ಪ್ಲ್ಯಾನ್ ಕುರಿತು ಬಿಸಿಸಿಐ ಹಲಾಲ್ ಮೀಟ್ ಕಡ್ಡಾಯಗೊಳಿಸಿದೆ ಎಂದು ಸುದ್ದಿಗಳು ಹರಿದಾಡಿದ್ದವು. ಟೀಂ ಇಂಡಿಯಾ ಆಟಗಾರರು ಹಲಾಲ್ ಮಾಂಸವನ್ನೇ ಸೇವನೆ ಮಾಡಬೇಕು ಎಂಬ ನಿಯಮವನ್ನ ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದರು. ಹಲಾಲ್ ಮಾಂಸ ಹೇಗೆ ಇತರೆ ಮಾಂಸಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾದ್ರು. ಅಲ್ಲದೆ ಇದು ಆಟಗಾರರ ಫಿಟ್ನೆಸ್ ಸುಧಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಸಿ ಎಂದು ಬಿಸಿಸಿಐ ಅನ್ನು ಪ್ರಶ್ನಿಸಿದ್ದಾರೆ.
ಆದರೆ, ಈಗ ಬಿಸಿಸಿಐ ಖಜಾಂಚಿ ಪ್ರಕಾರ ಬಿಸಿಸಿಐ ಅಂತಹ ಯಾವುದೇ ನಿರ್ದೇಶನವನ್ನ ತನ್ನ ಆಟಗಾರರಿಗೆ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಈ ಕುರಿತು ಅಧಿಕೃತವಾಗಿ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದೇ ಆದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದ್ದು, ಈ ವಿವಾದ ಅಂತ್ಯಗೊಳ್ಳಲಿದೆ.
ನಾಳೆ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ
ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಹೊಸ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕುರಿತಾಗಿ ಮೊದಲ ಬಾರಿಗೆ ನಾಳೆ ಟೆಸ್ಟ್ ಪಂದ್ಯಆಡಲಿವೆ, ನ್ಯೂಜಿಲೆಂಡ್ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಭಾರತ ಹೊಸ ಹೆಜ್ಜೆಯನ್ನಿಡಲು ಸಜ್ಜಾಗಿದೆ.
ಟೀಂ ಇಂಡಿಯಾ ಸ್ಕ್ವಾಡ್
ಅಜಿಂಕ್ಯ ರಹಾನೆ (ನಾಯಕ) ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ) ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ದಿಮಾನ್ ಸಾಹಾ, ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ