
ಮ್ಯಾಚ್ ವಿನ್ನರ್ಗಳಿದ್ದರೂ ಭಾರತಕ್ಕೆ ಹಿನ್ನಡೆ
ಟೀಮ್ ಇಂಡಿಯಾ 2011ರ ವಿಶ್ವಕಪ್ ಗೆದ್ದ ಬಳಿಕ ಸಾಕಷ್ಟು ಯುವ ಆಟಗಾರರು ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ರಿಷಭ್ ಪಂತ್, ಕೆಎಲ್ ರಾಹುಲ್ ಅವರಂಥಾ ಆಟಗಾರರು ಭಾರತದ ಪರವಾಗಿ ಮ್ಯಾಚ್ ವಿನ್ನರ್ಗಳು ಎನಿಸಿಕೊಂಡಿದ್ದಾರೆ. ಆದರೆ ಈ ಎಲ್ಲಾ ಆಟಗಾರರು ಕೂಡ ದೊಡ್ಡ ವೇದಿಕೆಗಳಲ್ಲಿ ಮಿಂಚಲು ವಿಫಲವಾಗಿದ್ದಾರೆ. ಹೀಗಾಗಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಿರ್ಣಾಯಕ ಹಂತದಲ್ಲಿಯೇ ಸೋಲು ಅನುಭವಿಸಿದೆ.

ಸೂರ್ಯಕುಮಾರ್ ಯಾದವ್ ಬಗ್ಗೆ ಬ್ರೆಟ್ ಲೀ ವಿಶ್ವಾಸ
ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಮೆಚ್ಚುಗೆಯ ಮಾತುಗಳನ್ನಾಡಿರುವುದು ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಬಗ್ಗೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಬ್ರೆಟ್ ಲೀ ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಆಕರ್ಷಣೆಯಾಗಿದ್ದರು ಎಂದುಕೊಂಡಾಡಿದ್ದಾರೆ.

ಟಿ20 ಕ್ರಿಕೆಟ್ನ ಹೊಸ ಸೂಪರ್ ಸ್ಟಾರ್!
"ಭಾರತ ವಿಶ್ವಕಪ್ ಗೆಲ್ಲದಿರಬಹುದು, ಆದರೆ ಸೂರ್ಯ ಬೆಳಗಿದ್ದಾರೆ. ಖಂಡಿತವಾಗಿಯೂ ನಾನು ಮಾತನಾಡುತ್ತಿರುವುದು ಸೂರ್ಯಕುಮಾರ್ ಯಾದವ್ ಬಗ್ಗೆ. ಆತ ಟಿ20 ಜಗತ್ತಿನ ಹೊಸ ಸೂಪರ್ ಸ್ಟಾರ್. ಕಳೆದ 12-15 ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತ ಅದ್ಭುತವಾಗಿರುವುದನ್ನು ಸಾಧಿಸಿದ್ದಾರೆ. ಆತ ಆಸ್ಟ್ರೇಲಿಯಾದ ಚೆಂಡು ಪುಟಿಯುವಂತಾ ಪಿಚ್ನಲ್ಲಿಯೂ ಆ ರೀತಿಯ ಪ್ರದರ್ಶನ ನೀಡಿದ್ದಾರೆ. ಆತನ ನಿರ್ಭೀತ ವರ್ತನೆ ಹಾಗೂ ಹೊಡೆತಗಳ ಆಯ್ಕೆಯ ವಿಚಾರದಲ್ಲಿ ಆತ ಚೆಸ್ ಗ್ರ್ಯಾಂಡ್ಮಾಸ್ಟರ್ ರೀತಿ ಭಾಸವಾಗುತ್ತಾರೆ" ಎಂದಿದ್ದಾರೆ ಬ್ರೆಟ್ ಲೀ.

ವಿಶ್ವಕಪ್ ಗೆಲ್ಲಿಸಿ ಕೊಡಲಿದ್ದಾರೆ
ಟಿ20 ವಿಶ್ವಕಪ್ನಲ್ಲಿ ಅವರು ನನ್ನ ಪ್ರಕಾರ ಪ್ರಮುಖ ಆಕರ್ಷಣೆಯಾಗಿದ್ದರು. ತಮ್ಮದೇ ಶೈಲಿಯಲ್ಲಿ ಆಡುವುದನ್ನು ಅವರು ಮುಂದುವರಿಸಿದ್ದಾರೆ. ಅವರು ರನ್ಗಳನ್ನು ಮಾತ್ರವೇ ಗಳಿಸುತ್ತಿಲ್ಲ, ಖಂಡಿತವಾಗಿಯೂ ಮುಂದೊಂದು ದಿನ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿ ಕೊಡಲಿದ್ದಾರೆ. ಅವರು ಆಡುವುದನ್ನು ನೋಡುವುದು ನನಗೆ ಇಷ್ಟ. ಸೂರ್ಯಕುಮಾರ್ ಯಾದವ್ಗೆ ನನ್ನ ಸಲಹೆಯೆಂದರೆ.. ಏನೂ ಇಲ್ಲ! ಇಗ ನೀವು ಏನು ಮಾಡುತ್ತಿದ್ದೀರೋ ಅದನ್ನೇ ಮುಂದುವರಿಸಿ. ಯಾವುದನ್ನು ಬದಲಾಯಿಸಿಕೊಳ್ಳಬೇಡಿ. ವಿಷಯಗಳನ್ನು ಸಂಕೀರ್ಣಗೊಳಿಸಬೇಡಿ. ನಿಮಗೆ ನೀವೇ ಬೆಂಬಲಿಸಿ" ಎಂದು ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡುತ್ತಾ ಬ್ರೆಟ್ ಲೀ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications












