ಕೊಲಂಬೊ, ಆಗಸ್ಟ್ 5: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒತ್ತಡಕ್ಕೆ ಸಿಲುಕಿದೆ. ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಗೆ ಆಲೌಟ್ ಆಗಿದ್ದರಿಂದ ಭಾರತ ತಂಡ, ಶ್ರೀಲಂಕಾ ಮೇಲೆ ಫಾಲೋ ಆನ್ ಹೇರಿತು.
ಹಾಗಾಗಿ, ಒತ್ತಡಕ್ಕೆ ಸಿಲುಕಿರುವ ಲಂಕಾ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಶನಿವಾರ ದಿನಾಂತ್ಯದ ಹೊತ್ತಿಗೆ 2 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿದೆ. ಆದರೆ, ಫಾಲೋ ಆನ್ ನಿಂದ ಹೊರಬರಲು ಲಂಕಾ ಇನ್ನೂ, 230 ರನ್ ಪೇರಿಸಬೇಕಿದ್ದು, ಇದನ್ನು ಸಾಧಿಸಿದ ನಂತರ, ದೊಡ್ಡ ಮೊತ್ತವನ್ನು ಪೇರಿಸಿ ಭಾರತಕ್ಕೆ ಪಂದ್ಯ ಗೆಲ್ಲಲು ದೈತ್ಯ ಸವಾಲು ಹಾಕಬೇಕಿದೆ.
ಪಂದ್ಯ ಮುಗಿಯಲು ಇನ್ನೂ ಎರಡು ದಿನ ಬಾಕಿಯಿದೆ. ಅಷ್ಟರಲ್ಲಿ ದೊಡ್ಡ ಸವಾಲು ಪೇರಿಸಿ ಭಾರತಕ್ಕೆ ಬೇಗನೇ ಬ್ಯಾಟಿಂಗ್ ಬಿಟ್ಟುಕೊಡಬೇಕು. ಅತ್ಯುತ್ತಮವಾಗಿ ಆಡಿದರೆ, ಗೆಲವು ಗ್ಯಾರಂಟಿ. ಆದರೂ, ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳಲಾದರೂ ಲಂಕಾಕ್ಕೆ ಅವಕಾಶವಿದೆ. ಆದರೆ, ಇದು ತೀರಾ ವಿರಳ ಅವಕಾಶಗಳು. ಇವನ್ನು ಲಂಕಾ ಆಟಗಾರರ ಸದುಪಯೋಗಪಡಿಸಿಕೊಳ್ಳಬೇಕಷ್ಟೆ.
ಇನ್ನು, ಶನಿವಾರದ ಆಟದಲ್ಲಿ, ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (69 ರನ್, 5 ವಿಕೆಟ್) ಅವರ ಕೈಚಳಕದ ಮೋಡಿಗೆ ಸಿಲುಕಿದ ಶ್ರೀಲಂಕಾ ತಂಡ, ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್ ನಲ್ಲಿ 183 ರನ್ ಗಳಿಗೆ ಆಲೌಟ್ ಆಯಿತು. ಈ ಹಿನ್ನೆಲೆಯಲ್ಲಿ, 439 ರನ್ ಮುನ್ನಡೆ ಪಡೆದ ಭಾರತ ತಂಡ (ಟೀಂ ಇಂಡಿಯಾ ಮೊದಲ ಇನಿಂಗ್ಸ್: 622ಕ್ಕೆ 9 - ಡಿಕ್ಲೇರ್) ಶ್ರೀಲಂಕಾ ಮೇಲೆ ಫಾಲೋ ಆನ್ ಹೇರಿತು.
ದಿನದಾಟದಲ್ಲಿ, ಅಶ್ವಿನ್ ಮೋಡಿಗೆ ತಮ್ಮ ದೇಣಿಗೆಯನ್ನೂ ನೀಡಿದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ತಲಾ 2 ವಿಕೆಟ್, ಉಮೇಶ್ ಯಾದವ್ ಒಂದು ವಿಕೆಟ್ ಕಬಳಿಸುವ ಮೂಲಕ ಲಂಕಾ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು.
50ನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದವರ ಪಟ್ಟಿ: ಪೂಜಾರಗೆ 7ನೇ ಸ್ಥಾನ
ಪಂದ್ಯದ 2ನೇ ದಿನವಾದ ಶುಕ್ರವಾರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದ ಲಂಕಾ, ದಿನಾಂತ್ಯದ ಹೊತ್ತಿಗೆ ಕೇವಲ 50 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ (ಆರಂಭಿಕರಾದ ಕರುಣಾರತ್ನೆ, ಉಪುಲ್ ತರಂಗಾ) ಅವರನ್ನು ಕಳೆದುಕೊಂಡಿತ್ತು.
ಶನಿವಾರ ತನ್ನ ಇನಿಂಗ್ಸ್ ಮುಂದುವರಿಸಿದ ಆ ತಂಡದ ಪರವಾಗಿ, ಮಧ್ಯಮ ಕ್ರಮಾಂಕದ ನಿರೋಶನ್ ಡಿಕ್ವೆಲ್ಲಾ ಅವರು ಅರ್ಧಶತಕ ಸಿಡಿಸಿದ್ದು ಬಿಟ್ಟರೆ, ಮಿಕ್ಕ ಯಾರಿಂದಲೂ ಗಟ್ಟಿ ಆಟ ಹೊರಹೊಮ್ಮಲೇ ಇಲ್ಲ.
ಶನಿವಾರ, ಏಂಜೆಲೋ ಮ್ಯಾಥ್ಯೂಸ್ (26), ಮಧ್ಯಮ ಕ್ರಮಾಂಕದ ಇತರ ಬ್ಯಾಟ್ಸ್ ಮನ್ ಗಳಾದ ದಿಲ್ರುವಾನ್ ಪೆರೇರಾ (25), ನುವಾನ್ ಪ್ರದೀಪ್ (0) ವಿಕೆಟ್ ಕಬಳಿಸಿದರು.
ಸೌರಾಷ್ಟ್ರ ತಂಡಕ್ಕೆ ಸೇರ್ಪಡೆಗೊಂಡ ರಾಜ್ಯದ ರಾಬಿನ್ ಉತ್ತಪ್ಪ
ಇನ್ನು, ಜಡೇಜಾ ಅವರು, ನಾಯಕ ಚಂಡೀಮಲ್ (10), ಧನಂಜಯ ಡಿಸಿಲ್ವ (0) ವಿಕೆಟ್ ಪಡೆದರೆ, ವೇಗಿ ಮೊಹಮ್ಮದ್ ಶಮಿ ಅವರು, ಡಿಕ್ವೆಲ್ಲಾ (51), ರಂಗನಾ ಹೆರಾತ್ (2) ವಿಕೆಟ್ ಉರುಳಿಸಿದರು. ಶಮಿ ಪಡೆದ ವಿಕೆಟ್ ಗಳಲ್ಲಿ ಕ್ರೀಸ್ ಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಡಿಕ್ವೆಲ್ಲಾ ವಿಕೆಟ್ ಉರುಳಿಸಿದ್ದು ಪ್ರಮುಖವಾಗಿತ್ತು. ಇದೆಲ್ಲದಕ್ಕೂ ಮುನ್ನ, ಮೂರನೇ ಕ್ರಮಾಂಕದ ಕುಸಲ್ ಮೆಂಡಿಸ್ (24) ಅವರು, ಉಮೇಶ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಫಾಲೋ ಆನ್ ಹೇರಿಸಿಕೊಂಡ ನಂತರ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಲಂಕಾ ಕೇವಲ 7 ರನ್ ಮೊತ್ತಕ್ಕೆ ಆರಂಭಿಕ ಉಪುಲ್ ತರಂಗಾ (2) ಅವರನ್ನು ಕಳೆದುಕೊಂಡಿತು. ಆನಂತರ, ಬಂದ ಮೂರನೇ ಕ್ರಮಾಂಕದ ಕುಸಲ್ ಮೆಂಡಿಸ್ ಅವರು, ಮತ್ತೊಬ್ಬ ಆರಂಭಿಕ ಕರುಣಾರತ್ನೆ ಜತೆಗೂಡಿ 191 ರನ್ ಗಳ ಜತೆಯಾಟ ನೀಡಿ ಇನಿಂಗ್ಸ್ ಗೆ ಶಕ್ತಿ ತುಂಬಿದರು.
56ನೇ ಓವರ್ ನಲ್ಲಿ ಮೆಂಡಿಸ್ (110) ಅವರು, ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ನಲ್ಲಿ ಔಟಾದರು. ಆನಂತರ, ಕರುಣಾರತ್ನೆ (ಔಟಾಗದೇ 92) ಅವರಿಗೆ ಜೋಡಿಯಾದ ಪುಷ್ಪಕುಮಾರ (ಔಟಾಗದೇ 110) ಅವರು ದಿನಾಂತ್ಯದವರೆಗೂ ಕ್ರೀಸ್ ನಲ್ಲಿ ಉಳಿದಿದ್ದರು.
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 622ಕ್ಕೆ 9 (ಡಿ); ಶ್ರೀಲಂಕಾ ಮೊದಲ ಇನಿಂಗ್ಸ್ 183 (ಡಿಕ್ವೆಲ್ಲಾ 51, ಏಂಜೆಲೋ ಮ್ಯಾಥ್ಯೂಸ್ 26; ರವಿಚಂದ್ರನ್ ಅಶ್ವಿನ್ 69ಕ್ಕೆ 5, ಶಮಿ 13ಕ್ಕೆ 2); ಶ್ರೀಲಂಕಾ ದ್ವಿತೀಯ ಇನಿಂಗ್ಸ್ 209ಕ್ಕೆ 2 (ಫಾಲೋ ಆನ್ ಹೇರಿಕೆ) (ಕುಸಲ್ ಮೆಂಡಿಸ್ 110, ಕರುಣಾರತ್ನೆ 92; ಉಮೇಶ್ ಯಾದವ್ 29ಕ್ಕೆ 1, ಹಾರ್ದಿಕ್ ಪಾಂಡ್ಯ 12ಕ್ಕೆ 1).