ಭಾರತ ತಂಡಕ್ಕೆ ಸೇರ್ಪಡೆಯಾಗಲು ಪೃಥ್ವಿ ಶಾ ಅನೇಕ ಬಾರಿ ಪ್ರಯತ್ನಪಟ್ಟರೂ ಕೂಡ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. ಆದರೂ ದೇಶೀಯ ಕ್ರಿಕೆಟ್ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದಾರೆ.
ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರವಾಗಿ 379 ರನ್ ಗಳಿಸುವ ಮೂಲಕ ಮತ್ತೆ ಆಯ್ಕೆದಾರರ ಗಮನ ಸೆಳೆದಿದ್ದಾರೆ. 2021ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತದ ಪರವಾಗಿ ಟಿ20 ಪಂದ್ಯವನ್ನಾಡಿದ್ದರು. ಅದಾದ ನಂತರ ದೇಶೀಯ ಕ್ರಿಕೆಟ್ನಲ್ಲಿ ಹಲವು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ.
Ranji Trophy: ರಾಜಸ್ಥಾನದ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ
ಗುವಾಹಟಿಯ ಅಮಿಂಗ್ಗಾಂವ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪೃಥ್ವಿ ಶಾ 383 ಎಸೆತಗಳಲ್ಲಿ 379 ಸಿಡಿಸುವ ಮೂಲಕ ಹಲವು ದಾಖಲೆ ಬರೆದರು. ಅಸ್ಸಾಂ ವಿರುದ್ಧ 379 ರನ್ ಬಾರಿಸುವ ಮೂಲಕ ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾದರು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಎರಡನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್ ಎಂದು ದಾಖಲೆ ನಿರ್ಮಿಸಿದರು.
ಯುವ ಆಟಗಾರನಿಗೆ ಅವಕಾಶ ನೀಡುವಂತೆ ಮನವಿ
ಪೃಥ್ವಿ ಶಾ ಬ್ಯಾಟಿಂಗ್ ನೋಡಿದ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್, ಪೃಥ್ವಿ ಶಾರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಪೃಥ್ವಿ ಶಾ ಬ್ಯಾಟಿಂಗ್ ಬಗ್ಗೆ ಮಾತನಾಡಿದ ವೆಂಕಟೇಶ್ ಪ್ರಸಾದ್, "ಆತ ಅಪರೂಪದ ಮತ್ತು ವಿಶೇಷ ಪ್ರತಿಭೆ, ಆತನಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು, ಅವರ ಜೊತೆ ಪರಿಣಾಮಕಾರಿ ಸಂವಹನ ನಡೆಸುವುದು ತಂಡದ ಮ್ಯಾನೇಜ್ಮೆಂಟ್ ಕೆಲಸ, ಅದರಿಂದ ಅವರಿಗೆ ಮತ್ತು ಭಾರತ ತಂಡಕ್ಕೆ ಇಬ್ಬರಿಗೂ ಸಹಕಾರಿಯಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಆತ ದುರದೃಷ್ಟ ಕ್ರಿಕೆಟಿಗ, ಎಲ್ಲಾ ಸ್ವರೂಪಗಳಲ್ಲಿ ರನ್ ಗಳಿಸಿದ್ದಾರೆ. ಪ್ರತಿಭೆಯ ಮಾನದಂಡವನ್ನು ಪರಿಗಣಿಸಿದರೆ ಅವರು ಈಗಾಗಲೇ ತಂಡದಲ್ಲಿ ಇರಬೇಕಿತ್ತು. ಆದರೆ, ಕೆಲವು ತಪ್ಪು ಗ್ರಹಿಕೆಗಳು ಅವರ ವೃತ್ತಿ ಜೀವನವನ್ನೇ ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ.
ಪೃಥ್ವಿ ಶಾ ಪ್ರತಿಕ್ರಿಯೆ
ನಾವು ನಮ್ಮ ಕೆಲಸಗಳನ್ನು ಸರಿಯಾಗಿ ಮಾಡಬೇಕು. ನಮ್ಮೊಂದಿಗೆ ಪ್ರಾಮಾಣಿಕವಾಗಿ, ವೃತ್ತಿ ಜೀವನದಲ್ಲಿ ಶಿಸ್ತು ಬದ್ದವಾಗಿ ಇರುತ್ತೇವೆ. ಕೆಲವೊಮ್ಮೆ ಜನ ವಿಭಿನ್ನವಾಗಿ ಮಾತನಾಡುತ್ತಾರೆ. ನಮಗೆ ಗೊತ್ತಿಲ್ಲದ ಜನ ನಮ್ಮ ಬಗ್ಗೆ ನಿರ್ಣಯ ಮಾಡುತ್ತಾರೆ ಎಂದು ಪೃಥ್ವಿ ಶಾ ಹೇಳಿದ್ದಾರೆ.