

ನವದೆಹಲಿ, ಸೆಪ್ಟೆಂಬರ್ 14: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಸೀರೆಯುಟ್ಟು, ಬಿಂದಿ ಇಟ್ಕೊಂಡು ತೃತೀಯ ಲಿಂಗಿಗಳ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಯಲ್ಲೂ ಹೆಸರು ಮಾಡುತ್ತಿರುವ ಗಂಭೀರ್ ಅವರು ಇಲ್ಲಿ ನಡೆದಿರುವ ಏಳನೇ ವರ್ಷದ ಹಿಜಡಾ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಭಾರತೀಯ ದಂಡಸಂಹಿತೆಯ ಸೆಕ್ಷನ್ 377 ರದ್ದುಗೊಳಿಸಿ, ಸುಪ್ರೀಂಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದನ್ನು ಗಂಭೀರ್ ಸ್ವಾಗತಿಸಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿಲ್ಲ ಸೆಕ್ಷನ್ 377
ಎಚ್ಐವಿ/ಏಡ್ಸ್ ಅಲೈನ್ಸ್ ಇಂಡಿಯಾ ಆಯೋಜಿಸಿದ್ದ ತೃತೀಯಲಿಂಗಿಗಳ ಹಬ್ಬದಲ್ಲಿ ನೂರಾರು ಮಂದಿ ಜತೆ ಗಂಭೀರ್ ಪಾಲ್ಗೊಂಡು ಸಂಭ್ರಮಿಸಿದರು. "ಬಾರ್ನ್ ದಿಸ್ ವೇ" ಎಂಬ ಥೀಮ್ ನೊಂದಿಗೆ ಈ ವರ್ಷದ ಆಚರಣೆ ಮೊದಲುಗೊಂಡಿದೆ.
ತೃತೀಯಲಿಂಗಿಗಳು ಒಂದೆಡೆ ಸೇರಿ, ಸಮುದಾಯದ ಸಬಲೀಕರಣ ಬಗ್ಗೆ ಚರ್ಚಿಸಲಾಗುತ್ತದೆ. ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಆಯಾ ಕ್ಷೇತ್ರದಲ್ಲಿ ದೇಶಕ್ಕಾಗಿ ಕೊಡುಗೆ ನೀಡುವಂತೆ ಅರಿವು ಮೂಡಿಸಲಾಗುತ್ತದೆ. ಈ ಹಬ್ಬದಲ್ಲಿ ಭಾಗವಹಿಸಿದ ಗಂಭೀರ್ ಸೀರೆ ಧರಿಸಿ, ತೃತೀಯ ಲಿಂಗಿಗಳನ್ನು ಬೆಂಬಲಿಸಿದರು.
ಈ ವರ್ಷದ ರಕ್ಷಾ ಬಂಧನ ಹಬ್ಬವನ್ನು ಕೂಡಾ ತೃತೀಯಲಿಂಗಿಗಳ ಜತೆ ಗಂಭೀರ್ ಆಚರಿಸಿಕೊಂಡಿದ್ದರು. ರೇಡಿಯೋ ಕಾರ್ಯಕ್ರಮವೊಂದರಲ್ಲಿ ತೃತೀಯಲಿಂಗಿಗಳ ಕೈಯಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.