
ಸೆಪ್ಟೆಂಬರ್ನಲ್ಲಿ ನಿಷೇಧ ಕೊನೆ
2015ರಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಶ್ರೀಶಾಂತ್ ಮೇಲಿನ ಆರೋಪ ವಿಶೇಷ ನ್ಯಾಯಾಲಯದಿಂದ ಖುಲಾಸೆಗೊಂಡಿತ್ತು. 2018ರಲ್ಲಿ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಬಿಸಿಸಿಐಗೆ ಹೇಳಿತ್ತು. ಸುಪ್ರೀಮ್ ಕೋರ್ಟ್ ಕೂಡ ನಿಷೇಧವನ್ನು ಕಡಿಮೆಗೊಳಿಸುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಶಾಂತ್ ಮೇಲಿನ 7 ವರ್ಷಗಳ ನಿಷೇಧ ಇದೇ ಸೆಪ್ಟೆಂಬರ್ನಲ್ಲಿ ಕೊನೆಗೊಳ್ಳಲಿದೆ.

ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ ಶ್ರೀ
ಮತ್ತೆ ಕ್ರಿಕೆಟ್ ಆಡುವ ಅವಕಾಶದ ಬಾಗಿಲು ತೆರೆದಿರುವುದರಿಂದ ಉತ್ಸಾಹಗೊಂಡಿರುವ ಶ್ರೀಶಾಂತ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಆನ್ಲೈನ್ನಲ್ಲಿ ಮಾನಸಿಕ ಅಭ್ಯಾಸದ ಕೋಚ್ ಟಿಮ್ ಗ್ರೋವರ್ ಅವರಿಂದ ಮೆಂಟಲ್ ಕಂಡೀಶನಿಂಗ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದಾರೆ. ಗ್ರೋವರ್ ಅವರು ಎನ್ಬಿಎ ಸ್ಟಾರ್ ಆಟಗಾರರಾದ ಮೈಕಲ್ ಜೋರ್ಡನ್ ಮತ್ತು ಕೋಬ್ ಬ್ರ್ಯಾಂಟ್ ಅಂಥವರಿಗೆ ತರಬೇತಿ ನೀಡುತ್ತಿದ್ದವರು.

ಐಪಿಎಲ್ನಲ್ಲಿ ಆಡಿಯೇ ಆಡುತ್ತೇನೆ
'ಕ್ರಿಕೆಟ್ ಅಂಗಳಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡುವ ಮೂಲಕ ನಾನು ನನ್ನ ಹೆಸರನ್ನು ಐಪಿಎಲ್ ಆಟಗಾರರ ಹರಾಜು ಪಟ್ಟಿಗೆ ಸೇರಿಸುತ್ತೇನೆ. ಕೆಲವು ತಂಡಗಳು ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿವೆ. ಐಪಿಎಲ್ ಆಡಿಯೇ ಆಡುತ್ತೇನೆ ಎಂದು ನಾನು ನನ್ನಷ್ಟಕೆ ಯಾವಾಗಲೂ ಹೇಳುತ್ತಿರುತ್ತೇನೆ. ನನ್ನನ್ನು ಕ್ರಿಕೆಟ್ನಿಂದ ಹೊರಗೆಸೆದಿದ್ದು ಐಪಿಎಲ್ನಲ್ಲಿ, ಅದಕ್ಕಾಗೇ ನಾನು ಅದೇ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡುತ್ತೇನೆ, ಪಂದ್ಯಗಳನ್ನು ಗೆಲ್ಲುತ್ತೇನೆ,' ಎಂದು ಪಿಟಿಐ ಜೊತೆ ಮಾತನಾಡಿದ 37ರ ಹರೆಯದ ಶ್ರೀಶಾಂತ್ ಭರವಸೆ ವ್ಯಕ್ತಪಡಿಸಿದ್ದಾರೆ.

ಭಯವನ್ನು ಎದುರಿಸಲು ಬಯಸಿದ್ದೇನೆ
'ಮುಂದಿನ ಕ್ರಿಕೆಟ್ ಪಂದ್ಯ ಆಡುವಾಗ ಜನ ನನ್ನ ಬಗ್ಗೆ ಏನು ಮಾತನಾಡುತ್ತಾರೆ ಅನ್ನೋ ಭಯ ನನ್ನಲ್ಲಿ ಹೆಚ್ಚಾಗಿದೆ. ನಾನು ಏನು ಮಾಡಿದ್ದೇನೆ ಮತ್ತು ಅದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಆ ಜನರು ಅರಿತುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ. ನಾನು ಭಾರತಕ್ಕಾಗಿ ಆಡಿದರೂ ಐಪಿಎಲ್ ಮೂಲಕ ಮಾತ್ರ ನನಗಾದ ನೋವಿಗೆ ಉತ್ತರವನ್ನು ನೀಡಬಲ್ಲೆ. ನಾನು ಭಯವನ್ನು ಎದುರಿಸಲು ಬಯಸುತ್ತೇನೆ,' ಎಂದು ಶ್ರೀಶಾಂತ್ ದಿಟ್ಟ ಮಾತುಗಳನ್ನಾಡಿದ್ದಾರೆ.


Click it and Unblock the Notifications












