ವಾಶಿಂಗ್ಟನ್ ಸುಂದರ್ ಬಗ್ಗೆ ಮೆಚ್ಚುಗೆಯ ಮಾತು
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಕನೆರಿಯಾ. "ವಾಶಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಅದ್ಭುತವಾಗಿದ್ದರು, ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದ್ದಾರೆ. ಆದರೆ ಆ ಮೇಲುಗೈಯನ್ನು ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ಹೊಸ ಚೆಂಡಿನಲ್ಲಿ ತಾನು ಬೌಲಿಂಗ್ ನಡೆಸುವುದಕ್ಕಿಂತ ಸುಂದರ್ಗೆ ನೀಡಬಹುದಾಗಿತ್ತು. ಆತ ಲೈನ್ ಹಾಗೂ ಲೆಂತ್ನಲ್ಲಿಯೂ ಅದ್ಭುತವಾಗಿದ್ದರು" ಎಂದಿದ್ದಾರೆ ದಾನಿಶ್ ಕನೆರಿಯಾ.
ಹಾರ್ದಿಕ್ ನಾಯಕತ್ವದ ಬಗ್ಗೆಯೂ ಮಾತು
"ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆಯೂ ಕನೆರಿಯಾ ಕೆಲ ಮಾತುಗಳನ್ನಾಡಿದ್ದಾರೆ. "ಬೌಲರ್ಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ಚಾಣಾಕ್ಷ ಎಂದು ಅನಿಸುವುದಿಲ್ಲ. ಆತ ಶಿವಂ ಮಾವಿ ಅವರನ್ನು ಬಹಳ ತಡವಾಗಿ ದಾಳಿಗಿಳಿಸಿದರು. ಆತ ಬೇಗನೆ ದಾಳಿಗೆ ಇಳಿಯಬೇಕಾಗಿತ್ತು. ದೀಪಕ್ ಹೂಡಾ ಅವರನ್ನು ಕೂಡ ಹೆಚ್ಚು ಬಳಸಿಕೊಳ್ಳಬಹುದಾಗಿತ್ತು. ಯಾಕೆಂದರೆ ಇಲ್ಲಿ ಬಹಳಷ್ಟು ತಿರುವು ಪಡೆಯುತ್ತಿತ್ತು. ಈ ವಿಚಾರದಲ್ಲಿ ಹಾರ್ದಿಕ್ ರಣತಂತ್ರದಲ್ಲಿ ಹಿಂದುಳಿದರು" ಎಂದಿದ್ದಾರೆ ದಾನಿಶ್ ಕನೆರಿಯಾ.
ಭಾರತದ ಬೌಲಿಂಗ್ ಬಗ್ಗೆ ಟೀಕೆ
ಇನ್ನು ಭಾರತದ ಬೌಲರ್ಗಳು ಪಿಚ್ನ ಲಾಭವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ವಿಫಲವಾದರು ಎಂಬುದಾಗಿಯೂ ಕನೆರಿಯಾ ಹೇಳಿದ್ದಾರೆ. "ಭಾರತದ ಬೌಲರ್ಗಳು ಸಾಕಷ್ಟು ರನ್ ಬಿಟ್ಟುಕೊಟ್ಟರು. ಹಾರ್ದಿಕ್ ಹೊಸ ಚೆಂಡಿನಲ್ಲಿ ಉತ್ತಮವಾಗಿ ಬೌಲಿಂಗ್ ನಡೆಸಲು ವಿಫಲವಾದರು. ಈ ಸಂದರ್ಭದಲ್ಲಿ ಕಿವೀಸ್ ಬ್ಯಾಟರ್ಗಳಾದ ಡೆವೋನ್ ಕಾನ್ವೆ ಹಾಗೂ ಫಿನ್ ಅಲೆನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇವರಿಬ್ಬರು ಕೂಡ ಆರಂಬದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ಗೆ ಮುಂದಾದರು" ಎಂದಿದ್ದಾರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ.