2023ರ ವಿಶ್ವಕಪ್ ಆಯ್ಕೆ ಮಂಡಳಿಗೆ ದೊಡ್ಡ ಸವಾಲು: ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಹೀಗಂದಿದ್ಯಾಕೆ?

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಚಕವಾಗಿ ಸೆಣೆಸಾಡಿದ ಟೀಮ್ ಇಂಡಿಯಾ 9 ರನ್ಗಳ ಅಂತರದಿಂದ ಸೋಲು ಅನುಭವಿಸಿದರೂ ತಂಡದ ಪ್ರದರ್ಶನ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಮೊದಲ ಆಯ್ಕೆಯ ಬಹುತೇಕ ಆಟಗಾರರು ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಯುವ ಪಡೆಯೊಂದಿಗೆ ಈ ಸರಣಿಯಲ್ಲಿ ಭಾರತ ತಂಡ ಕಣಕ್ಕಿಳಿದಿದೆ. ಹಾಗಿದ್ದರೂ ಪೂರ್ಣ ಸಾಮರ್ಥ್ಯದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಬಹುತೇಕ ಗೆಲುವಿನ ಅಂಚಿಗೆ ತಲುಪಿ ಎಡವಿತ್ತು.
ಈ ಪ್ರದರ್ಶನದ ಬಳಿಕ ಈ ಸರಣಿಯಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿರುವ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಬರು ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಆ ಸಂದರ್ಭದಲ್ಲಿ ಭಾರತ ತಂಡವನ್ನು ಆಯ್ಕೆ ಮಾಡುವುದು ಆಯ್ಕೆ ಮಂಡಳಿಗೆ ದೊಡ್ಡ ಸವಾಲಾಗಿರಲಿದೆ ಎಂದಿದ್ದಾರೆ ಲಕ್ಷ್ಮಣ್.

ಆಟಗಾರರ ಪ್ರದರ್ಶನಕ್ಕೆ ಲಕ್ಷ್ಮಣ್ ಹರ್ಷ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗದಿದ್ದರೂ ಭಾರತ ತಂಡದ ಪ್ರದರ್ಶನದಿಂದ ವಿವಿಎಸ್ ಲಕ್ಷ್ಮಣ್ ಸಂತಸಗೊಂಡಿದ್ದಾರೆ. ಆದರಲ್ಲೂ ಕೆಲ ಆಟಗಾರರು ಅದ್ಭುತ ಲಯದಲ್ಲಿರುವುದು ಲಕ್ಷ್ಮಣ್ ಮನಗೆದ್ದಿದ್ದೆ. ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಐಯ್ಯರ್ ಭಾರತದ ಏಕದಿನ ಮಾದರಿಯ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹರಸಾಹಸಪಡುತ್ತಿದ್ದರೂ ಈ ಸರಣಿಯ ಮೊದಲ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ತೋರಿದ ಪ್ರಬುದ್ಧತೆಯನ್ನು ಲಕ್ಷ್ಮಣ್ ಮೆಚ್ಚಿಕೊಂಡಿದ್ದಾರೆ. ಹೀಗಾಘಿ ಮುಂದಿನ ಏಕದಿನ ವಿಶ್ವಕಪ್ ಆಯ್ಕೆ ಮಂಡಳಿಗೆ ದೊಡ್ಡ ಸವಾಲೇ ಸರಿ ಎಂದಿದ್ದಾರೆ.

ಪ್ರತಿಭಾವಂತರ ದೊಡ್ಡ ಪಡೆಯಿದೆ
"ನಮ್ಮಲ್ಲಿ ಉತ್ತಮ ಕ್ರಿಕೆಟಿಗರ ದೊಡ್ಡ ಪಡೆಯೇ ಇದೆ. ಅವರೆಲ್ಲರೂ ಈ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಅವರ ನಡುವಿನ ಸ್ಪರ್ಧೆ ಬಹಳ ಉತ್ತಮವಾಗಿದೆ. ಪ್ರತಿಭಾವಂತ ಆಟಗಾರರಲ್ಲಿ ಆಯ್ಕೆಯೇ ದೊಡ್ಡ ಸವಾಲಾಗಿದೆ. 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಸರಿಯಾದ ಆಟಗಾರರ ತಂಡವನ್ನು ಆಯ್ಕೆ ಮಾಡುವುದು ಆಯ್ಕೆ ಮಂಡಳಿಗೆ ದೊಡ್ಡ ಸವಾಲಾಗಿರುತ್ತದೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದ ಬಳಿಕ ಸ್ಟಾರ್ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಈ ಮಾತನ್ನು ಅವರು ಹೇಳಿದ್ದಾರೆ.

ರೋಚಕವಾಗಿ ಸೆಣೆಸಾಡಿ ಸೋತ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡ ಆರಂಭಿಕ ಹಿನ್ನಡೆ ಅನುಭವಿಸಿದರೂ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ 40 ಓವರ್ಗಳ ಪಂದ್ಯದಲ್ಲಿ 249 ರನ್ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟದಿ ಭಾರತ ತಂಡ ಆರಂಭದಲ್ಲಿ ಕೆಲ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತಾದರೂ ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಐಯ್ಯರ್, ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ನಿಂದಾಗಿ ಗೆಲುವಿನ ವಿಶ್ವಾಸ ಮುಡಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿದ ಭಾರತ ಕೇವಲ 9 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿದೆ.
ಭಾರತ ಸ್ಕ್ವಾಡ್ ಹೀಗಿದೆ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್, ದೀಪಕ್ ಚಾಹರ್
ದಕ್ಷಿಣ ಆಫ್ರಿಕಾ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ, ಆಂಡಿಲ್ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಅನ್ರಿಚ್ ನಾರ್ಟ್ಜೆ, ರೀಜಾ ಹೆಂಡ್ರಿಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications