IND vs SA: ಐಪಿಎಲ್ ಸೆನ್ಸೆಷನ್ ಉಮ್ರಾನ್ ಮಲಿಕ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ನಾಯಕತ್ವದ ಜವಾಬ್ದಾರಿಯು ಕ್ರಿಕೆಟಿಗರ ಬೆಳವಣಿಗೆಯನ್ನು ಉತ್ತಮಗೊಳಿಸಲು ಸಹಾಯ ಮಾಡುವುದರಿಂದ ಐಪಿಎಲ್ನಂತಹ ಪಂದ್ಯಾವಳಿಯಲ್ಲಿ ನಾಯಕರಾಗಿ ಭಾರತೀಯ ಆಟಗಾರರ ಯಶಸ್ಸು, ಅಂತಿಮವಾಗಿ ರಾಷ್ಟ್ರೀಯ ತಂಡಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತನ್ನ ಮೊದಲ ಐಪಿಎಲ್ ಋತುವಿನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಯಾ ಫ್ರಾಂಚೈಸಿಗಳ ತಂಡವನ್ನು ಮುನ್ನಡೆಸುವಾಗ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಕೆಎಲ್ ರಾಹುಲ್ ಅವರು ಹೊಸದಾಗಿ ಸೇರ್ಪಡೆಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತಮ್ಮ ಮೊದಲ ಋತುವಿನಲ್ಲಿ ಪ್ಲೇಆಫ್ಗೆ ಮುನ್ನಡೆಸಿದರು. ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರನ್ನರ್-ಅಪ್ ಸ್ಥಾನದವರೆಗೂ ಸಂಜು ಸ್ಯಾಮ್ಸನ್ ಮುನ್ನಡೆಸಿದರು.

ವೇಗದ ಮೂಲಕ ಎಲ್ಲರ ಗಮನ ಸೆಳೆದ ಉಮ್ರಾನ್ ಮಲಿಕ್
"ಐಪಿಎಲ್ನಲ್ಲಿ ಬಹಳಷ್ಟು ಭಾರತೀಯ ನಾಯಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅದ್ಭುತವಾಗಿದೆ, ಹಾರ್ದಿಕ್ ಪಾಂಡ್ಯ ಅವರಲ್ಲಿ ಒಬ್ಬರು. ಕೆಎಲ್ ರಾಹುಲ್ ಎಲ್ಎಸ್ಜಿಗೆ ಮತ್ತು ಸಂಜು ಸ್ಯಾಮ್ಸನ್ ಆರ್ಆರ್ ತಂಡಕ್ಕೆ ಉತ್ತಮ ನಾಯಕತ್ವ ನೀಡಿದ್ದಾರೆ ಅದೇ ರೀತಿ ಕೆಕೆಆರ್ನಲ್ಲಿ ಶ್ರೇಯಸ್ ಅಯ್ಯರ್," ಎಂದು ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸಮಯದಲ್ಲಿ ವೇಗದ ಬೌಲರ್ ಉಮ್ರಾನ್ ಮಲಿಕ್ ತಮ್ಮ ವೇಗದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಪರ 22 ವಿಕೆಟ್ಗಳನ್ನು ಪಡೆದರು ಮತ್ತು ಋತುವಿನ ಎರಡನೇ ಅತಿ ವೇಗದ ಎಸೆತವನ್ನು 157 ಕಿ.ಮೀ ಎಸೆದು ದಾಖಲೆ ನಿರ್ಮಿಸಿದ್ದಾರೆ.

ಭಾರತದ ಡ್ರೆಸ್ಸಿಂಗ್ ಕೋಣೆಯ ಬಾಗಿಲು ತೆರೆದಿದೆ
ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಆಯ್ಕೆಗಾರರು ಆಯ್ಕೆ ಮಾಡಿದ್ದರಿಂದ ಉಮ್ರಾನ್ ಮಲಿಕ್ರ ಕಠಿಣ ಪರಿಶ್ರಮವು ಭಾರತದ ಡ್ರೆಸ್ಸಿಂಗ್ ಕೋಣೆಯ ಬಾಗಿಲು ತೆರೆದಿದೆ. ಆದಾಗ್ಯೂ, ಉಮ್ರಾನ್ ಮಲಿಕ್ ಅವರು ಭಾರತಕ್ಕೆ ಚೊಚ್ಚಲ ಪಂದ್ಯವನ್ನು ಆಡುತ್ತಾರೆಯೇ ಎಂದು ಕೇಳಿದಾಗ, ದೊಡ್ಡ ತಂಡ ಇರುವುದರಿಂದ ಜನರು "ವಾಸ್ತವಿಕ' ಯೋಚಿಸಬೇಕು ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಉಮ್ರಾನ್ ಮಲಿಕ್ ಅವರ ಅವಕಾಶವನ್ನು ರಾಹುಲ್ ದ್ರಾವಿಡ್ ತಳ್ಳಿ ಹಾಕದಿದ್ದರೂ, ವೇಗದ ಬೌಲರ್ಗೆ ಎಷ್ಟು ಆಟದ ಸಮಯ ಸಿಗುತ್ತದೆ ಎಂಬುದನ್ನು ಮ್ಯಾನೇಜ್ಮೆಂಟ್ ನೋಡಿ ತೀರ್ಮಾನಿಸುತ್ತದೆ. ನಾನು ಖಂಡಿತವಾಗಿಯೂ ಅಂತಹ ಸ್ಥಿರತೆ ಹೊಂದಿರುವ ಆಟಗಾರನನ್ನು ಇಷ್ಟಪಡುವ ವ್ಯಕ್ತಿ. ನಮ್ಮಲ್ಲಿ ಅರ್ಶ್ದೀಪ್ ಇದ್ದಾರೆ, ಅವರೂ ಅದ್ಭುತವಾಗಿ ಪ್ರದರ್ಶನ ನೀಡುತ್ತಾರೆ. ಅಲ್ಲದೇ ನಮ್ಮೊಂದಿಗೆ ಅನುಭವಿ ಬೌಲಿಂಗ್ ಪಡೆ ಇದೆ. ಹರ್ಷಲ್ ಪಟೇಲ್, ಭುವಿ, ಅವೇಶ್ ಖಾನ್ ಕೂಡ ಇದ್ದಾರೆ.

ಅಂತಹ ವ್ಯಕ್ತಿಯನ್ನು ಹೊಂದಲು ತುಂಬಾ ಸಂತೋಷಪಡುತ್ತೇವೆ
"ನಿಸ್ಸಂಶಯವಾಗಿ ಅವನು (ಉಮ್ರಾನ್ ಮಲಿಕ್) ಕಲಿಯುತ್ತಿದ್ದಾನೆ. ಅವನು ಚಿಕ್ಕ ಹುಡುಗ ಮತ್ತು ಆಟದಲ್ಲಿ ಸುಧಾರಿಸುತ್ತಿದ್ದಾನೆ. ನಮ್ಮ ದೃಷ್ಟಿಕೋನದಿಂದ ಹೇಳುವುದಾದರೆ, ನಾವು ಅಂತಹ ವ್ಯಕ್ತಿಯನ್ನು ಹೊಂದಲು ತುಂಬಾ ಸಂತೋಷಪಡುತ್ತೇವೆ. ನಾವು ಅವರಿಗೆ ಎಷ್ಟು ಆಟದ ಸಮಯವನ್ನು ನೀಡಬಹುದು ಎಂಬುದನ್ನು ನಾವು ನೋಡಬೇಕು. ನಾವು ನೈಜವಾಗಿ ಯೋಚಿಸಬೇಕು, ನಮ್ಮಲ್ಲಿ ದೊಡ್ಡ ತಂಡವಿದ್ದು, ಎಲ್ಲರಿಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲು ಸಾಧ್ಯವಿಲ್ಲ," ಎಂದು ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಪಾಂಡ್ಯ ಅವರನ್ನು ಮರಳಿ ತಂಡಕ್ಕೆ ಪಡೆದಿರುವುದು ನಿಜಕ್ಕೂ ಸಂತಸ
"ಇನ್ನು ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ತಂಡಕ್ಕೆ ಪಡೆದಿರುವುದು ನಿಜಕ್ಕೂ ಸಂತಸ ತಂದಿದೆ. ಹಾರ್ದಿಕ್ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಕ್ರಿಕೆಟಿಗರಾಗಿದ್ದಾರೆ. ಅವರು ವೈಟ್-ಬಾಲ್ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ ಮತ್ತು ಈ ಐಪಿಎಲ್ನಲ್ಲೂ ಉತ್ತಮ ಫಾರ್ಮ್ ಅನ್ನು ತೋರಿಸಿದ್ದಾರೆ," ಎಂದು ರಾಹುಲ್ ದ್ರಾವಿಡ್ ಹೇಳಿದರು.
ಭಾರತ ತಂಡದ ಮಾಜಿ ಕ್ರಿಕೆಟಿಗರೂ ಆಗಿರುವ ರಾಹುಲ್ ದ್ರಾವಿಡ್, ಬರೋಡಾ ಆಟಗಾರನ ನಾಯಕತ್ವ ಕೌಶಲ್ಯದಿಂದ ಪ್ರಭಾವಿತರಾಗಿದ್ದಾರೆ ಮತ್ತು ಭಾರತ ತಂಡಕ್ಕಾಗಿ ಹಾರ್ದಿಕ್ ಪಾಂಡ್ಯ ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications