ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಅಂತಿಮ ಕ್ಷಣದಲ್ಲಿ ಆಯ್ಕೆಯಾದ ಜಯ್ದೇವ್ ಉನಾದ್ಕಟ್ ವೀಸಾ ಸಮಸ್ಯೆಯಿಂದಾಗಿ ಬಾಂಗ್ಲಾದೇಶಕ್ಕೆ ನಿಗದಿತ ಸಮಯದಲ್ಲಿ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊದಲ ಟೆಸ್ಟ್ನ ಆಯ್ಕೆಗೆ ಅನುಭವಿ ವೇಗಿ ಅನಿವಾರ್ಯವಾಗಿ ಅಲಭ್ಯವಾಗಿದ್ದರು. ಇದೀಗ ಕಡೆಗೂ ವೀಸಾ ಸಮಸ್ಯೆ ಬಗೆಹರಿದಿದ್ದು ಉನಾದ್ಕಟ್ ಬಾಂಗ್ಲಾದೇಶಕ್ಕೆ ಪ್ರಯಾಣಿಸಿ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಂಡಿದ್ದಾರೆ.
ಗಾಯದಿಂದಾಗಿ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಬದಲಿಗೆ ಟೆಸ್ಟ್ ಸರಣಿಯಲ್ಲಿ 31ರ ಹರೆಯದ ವೇಗಿ ಜಯ್ದೇವ್ ಉನಾದ್ಕಟ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. 12 ವರ್ಷಗಳ ಬಳಿಕ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ಉನಾದ್ಕಟ್ ಮೊದಲ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಮೊದಲ ಟೆಸ್ಟ್ನ ಎರಡನೇ ದಿನದಾಟದ ಸಂದರ್ಭದಲ್ಲಿ ಭಾರತ ತಂಡವನ್ನು ಉನಾದ್ಕಟ್ ಸೇರಿಕೊಂಡಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಜಯ್ದೇವ್ ಉನಾದ್ಕಟ್ ತಮ್ಮ ಏಕೈಕ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು 2010ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಂಚೂರಿಯನ್ನಲ್ಲಿ ಆಡಿದ್ದರು. ಅದಾದ ಬಳಿಕ 7 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡ ಇವರು 10 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಟ್ಟಿಗೊಳಿಸಲು ಸಾಧ್ಯವಾಗಿರಲಿಲ್ಲ. 2018ರಲ್ಲಿ ನಿದಾಹಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ವೈಟ್ಬಾಲ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದರು.
ಜಯ್ದೇವ್ ಉನಾದ್ಕಟ್ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದು ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚುತ್ತಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದು ವಿಜಯ್ ಹಜಾರೆ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಟೆಸ್ಟ್ನ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್ನ ಬ್ಯಾಟಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಬಳಿಕ ಬೌಲಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆತಿಥೇಯ ಬಾಂಗ್ಲಾದೇಶ ಸದ್ಯ ಸಂಕಷ್ಟದಲ್ಲಿದೆ
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್