ಕೆಪಿಎಲ್ ಟೂರ್ನಿಯಲ್ಲಿ ನಡೆದ ಫಿಕ್ಸಿಂಗ್ ಪ್ರಕರಣ ನಾನಾ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಹನಿಟ್ರ್ಯಾಪ್ ಮೂಲಕ ಆಟಗಾರರನ್ನು ಫಿಕ್ಸಿಂಗ್ ಬಲೆಗೆ ಕೆಡವಲಾಗಿದೆ ಅನ್ನುವ ಅಂಶ ಬಯಲಾಗಿತ್ತು. ಹೀಗಾಗಿ ಪ್ರಕರಣದ ಆಳಕ್ಕಿಳಿಯಲು ನಿರ್ಧರಿಸಿರುವ ಸಿಸಿಬಿ ಕೆಪಿಎಲ್ನಲ್ಲಿ ಭಾಗಿಯಾಗಿರುವ ಎಲ್ಲಾ ಆಟಗಾರರನ್ನೂ ತನಿಖೆಗೊಳಪಡಿಸಲು ನಿರ್ಧರಿಸಿದೆ.
ಕೆಪಿಎಲ್ ಫಿಕ್ಸಿಂಗ್ ಹಗರಣ: ತನಿಖೆ ಪೂರ್ಣಗೊಳ್ಳುವವರೆಗೆ ಕೆಪಿಎಲ್ ಇಲ್ಲ
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕೆಪಿಎಲ್ನಲ್ಲಿ ಪಾಲ್ಗೊಂಡಿರುವ ಎಲ್ಲಾ ಆಟಗಾರರಿಗೂ ಸಮನ್ಸ್ಅನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರರೂ ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟಿಗರೂ ಆಗಿರುವ ಅಭಿಮನ್ಯು ಮಿಥುನ್ ಮತ್ತು ಮನೀಶ್ ಪಾಂಡೆ, ವಿನಯ್ ಕುಮಾರ್, ಈ ಬಾರಿ ಕೆಪಿಎಲ್ನಲ್ಲಿ ಪಾಲ್ಗೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ. ಇವರನ್ನೂ ಸೇರಿದಂತೆ ಕೆಪಿಎಲ್ನಲ್ಲಿ ಪಾಲ್ಗೊಂಡಿರುವ ನೂರಕ್ಕೂ ಹೆಚ್ಚು ಆಟಗಾರರು ವಿಚಾರಣೆಗೆ ಒಳಗಾಗಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಈವರೆಗೆ ಏಳು ಮಂದಿಯನ್ನು ಬಂಧಿಸಿದೆ. ಬಳ್ಳಾರಿ ಟಸ್ಕರ್ಸ್ ಮಾಲೀಕ ಅರವಿಂದ್ ವೆಂಟೇಶ್ ರೆಡ್ಡಿಯವರಿಗೆ ಲುಕ್ಔಟ್ ನೋಡೀಸ್ ಕಳುಹಿಸಲಾಗಿದೆ. ಆಟಗಾರ ಭವೇಶ್ ಗುಲೆಚಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಬೆಳಗಾವಿ ಪ್ಯಾಂರ್ಸ್ ತಂಡದ ಮಾಲೀಕ ಅಸ್ಫಾಕ್ ಥಾರಾ ಪ್ರಕರಣದಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದು ತನಿಖೆಯಲ್ಲಿ ಆಟಗಾರರು ಹಾಗೂ ತಂಡದ ಅಧಿಕಾರಿಗಳು ಪಾಲ್ಗೊಂಡಿರುವುದು ಬೆಳಕಿಗೆ ಬಂದಿತ್ತು.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಬಂಧನ
ಬಳ್ಳಾರಿ ಟಸ್ಕರ್ಸ್ ನಾಯಕ ಸಿ ಎಂ ಗೌತಮ್, ಮತ್ತು ಐಪಿಎಲ್ ಡ್ರಮ್ಮರ್ ಭಾವೇಶ್ ಬಾಫ್ನಾ ಸೇರಿದಂತೆ ಏಳು ಮಂದಿ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ. ಹರ್ಯಾಣದ ಅಂತರಾಷ್ಟ್ರೀಯ ಬುಕ್ಕಿ ಸನ್ಯಾಮ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ.