
ಟಿ20 ವಿಶ್ವಕಪ್ನಲ್ಲಿ ಭಾರತದ ಅಭಿಯಾನ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ಭಾನುವಾರದಿಂದ ಭಾರತ ತನ್ನ ಹೋರಾಟವನ್ನು ಆರಂಭಿಸಲಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾದ 15 ಮಂದಿ ಆಟಗಾರರ ತಂಡ ಟೂರ್ನಿಗೆ ಸಂಪೂರ್ಣವಾಗಿ ಸಜ್ಜಾಗಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಡುವ ಬಳಗ ಬಲಿಷ್ಠವಾಗಿರಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಭಾರತದ ಆಡುವ ಬಳಗ ಹೇಗಿರಬೇಕು ಎಂಬುದಕ್ಕೆ ತಮ್ಮ ಉತ್ತರವನ್ನು ನೀಡಿದ್ದಾರೆ.
ನಿರೀಕ್ಷಿತ ಅಗ್ರ ಕ್ರಮಾಂಕ: ಪಾರ್ಥಿವ್ ಪಟೇಲ್ ಹೆಸರಿಸಿದ ಟೀಮ್ ಇಂಡಿಯಾದ ಆಡುವ ಬಳಗದ ಅಗ್ರ ಕ್ರಮಾಂಕ ನಿರೀಕ್ಷಿತವಾಗಿದೆ. ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾರನ್ನು ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ನಾಯಕ ವಿರಾಟ್ ಕೊಹ್ಲಿ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿಯೂ ಆರಂಭಿಕನಾಗಿ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಮಧ್ಯಮ ಕ್ರಮಾಂಕ: ಪಾರ್ಥೀವ್ ಪಟೇಲ್ ಹೆಸರಿಸಿದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದು ಮಿಂಚಿದ್ದಾರೆ. ಇದೀಗ ಟಿ20 ವಿಶ್ವಕಪ್ನಲ್ಲಿಯೂ ಸೂರ್ಯಕುಮಾರ್ ಯಾದವ್ ಮಿಂಚುವ ವಿಶ್ವಾಸದಲ್ಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕ್ವಾಲಿಫೈಯರ್ ಹಂತದವರೆಗೆ ತಲುಪಿಸಿದ್ದ ಅನುಭವದಲ್ಲಿ ಈಗ ವಿಶ್ವಕಪ್ಗೆ ಪಂತ್ ಸಜ್ಜಾಗಿದ್ದಾರೆ. ಇನ್ನು ಬೌಲಿಂಗ್ ಮಾಡುವ ಬಗ್ಗೆ ಗೊಂದಲವಿದ್ದರೂ ಹಾರ್ದಿಕ್ ಪಾಂಡ್ಯಾಗೆ ನಂತರದ ಸ್ಥಾನವನ್ನು ನೀಡಲಾಗಿದೆ.
ಸ್ಪಿನ್ನರ್ಗಳಾಗಿ ಜಡೇಜಾ, ಚಹರ್: ಹಾರ್ದಿಕ್ ಪಾಂಡ್ಯ ಹೆಸರಿಸಿದ ಈ ಟಿ20 ವಿಶ್ವಕಪ್ನ ಆಡುವ ಬಳಗ ಇಬ್ಬರು ಸ್ಪಿನ್ನರ್ಗಳು ಇದ್ದಾರೆ. ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಸ್ಪಿನ್ನರ್ಗಳು ಅತ್ಯುತ್ತಮ ಯಶಸ್ಸು ಸಾಧಿಸಿದ ಕಾರಣದಿಂದಾಗಿ ಇಬ್ಬರು ಸ್ಪಿನ್ನರ್ಗಳನ್ನು ಕಣಕ್ಕಿಳಿಸುವ ಪ್ರಯೋಗ ಸೂಕ್ತ ಎಂದು ಪಾರ್ಥೀವ್ ಈ ನಿರ್ಧಾರ ಮಾಡಿದ್ದಾರೆ. ರವೀಂದ್ರ ಜಡೇಜಾ ಹಾಗೂ ರಾಹುಲ್ ಚಹರ್ ಅವರನ್ನು ಸ್ಪಿನ್ನರ್ಆಗಿ ತಂಡದಲ್ಲಿ ಪಟೇಲ್ ಹೆಸರಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿಯೂ ಜಡೇಜಾ ತಂಡಕ್ಕೆ ಆಧಾರವಾಗಲಿದ್ದಾರೆ.
ಮೂವರು ವೇಗಿಗಳು: ಇನ್ನು ಈ ತಂಡದಲ್ಲಿ 4 ವೇಗಿಗಳನ್ನು ಪಾರ್ಥೀವ್ ಪಟೇಲ್ ಹೆಸರಿಸಿದ್ದು ಇದರಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್ ಅವರಲ್ಲಿ ಒಬ್ಬರನ್ನು ಆಯ್ಕೆಗೆ ಬಿಟ್ಟಿದ್ದಾರೆ. ಉಳಿದಂತೆ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಪಾರ್ಥೀವ್ ಪಟೇಲ್ ಹೆಸರಿಸಿದ ಸಂಪೂರ್ಣ ತಂಡ ಹೀಗಿದೆ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಭುವನೇಶ್ವರ್, ಮೊಹಮ್ಮದ್ ಶಮಿ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ