ಸ್ಫೂರ್ತಿ ತುಂಬಿದ ಧೋನಿ
ಏಷ್ಯಾ ಕಪ್ 2018ರ ಮೂಲಕ ಖಲೀಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರಿಂದ ಟ್ರೋಫಿ ಗೆದ್ದ ಸಂಭ್ರಮ ಯುವ ಆಟಗಾರನ ಅನುಭವಕ್ಕೆ ಸಿಗಲಿ ಎಂಬ ಕಾರಣಕ್ಕೆ ಪ್ರಶಸ್ತಿ ವಿತರಣೆ ವೇಳೆ ಧೋನಿ ಅವರು ರೋಹಿತ್ ಅವರಲ್ಲಿ 'ಖಲೀಲ್ ಟ್ರೋಫಿ ಹಿಡಿದುಕೊಳ್ಳಲಿ' ಎಂದು ಹೇಳುವ ಮೂಲಕ ಸ್ಫೂರ್ತಿ ತುಂಬಿದ್ದರು. ಇದನ್ನು ಖಲೀಲ್ ನೆನಪಿಸಿಕೊಂಡರು.
ರೋಚಕ ಫೈನಲ್ ಹಣಾಹಣಿ
2018ರ ಏಷ್ಯಾ ಕಪ್ ಫೈನಲ್ ಪಂದ್ಯ ಸಾಕಷ್ಟು ರೋಚಕ ಎನಿಸಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 48.3 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 222 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಕೂಡ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಬಂದಿತ್ತು. ಪಂದ್ಯ ಬಾಲ್ ಟು ಬಾಲ್ ಗೆ ಬಂದಿತ್ತಾದರೂ ಅಂತಿಮ ವಾಗಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದು 223 ರನ್ ಪೇರಿಸಿ ರೋಚಕ ರೀತಿಯಲ್ಲಿ ಗೆಲುವನ್ನಾಚರಿಸಿತ್ತು.
ಖಲೀಲ್ ಕೈ ಸೇರಿದ್ದ ಟ್ರೋಫಿ
ಏಷ್ಯಾ ಕಪ್ ವಿಜೇತ ಭಾರತ ತಂಡಕ್ಕೆ ಟ್ರೋಫಿ ವಿತರಿಸುವಾಗ ನಾಯಕ ರೋಹಿತ್ ಶರ್ಮ ಟ್ರೋಫಿ ಈಸಿಕೊಂಡರು. ಮರುಕ್ಷಣವೇ ಮುಂಬೈ ಆಟಗಾರ ರೋಹಿತ್, ಟ್ರೋಫಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವ ಆಟಗಾರ ಅಹ್ಮದ್ ಕೈಗೆ ಹಸ್ತಾಂತರಿಸಿದ್ದರು.
ಅವಿಸ್ಮರಣೀಯ ಅನುಭವ
'ಟ್ರೋಫಿ ನನ್ನ ಕೈಗೆ ನೀಡುವಂತೆ ಧೋನಿ ಭಾಯಿ ರೋಹಿತ್ ಭಾಯಿ ಅವರಲ್ಲಿ ಹೇಳಿದರು. ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದ ಯುವ ಆಟಗಾರ ನಾನಾಗಿದ್ದರಿಂದ ರೋಹಿತ್ ಕೂಡ ಮರುಕ್ಷಣವೇ ಟ್ರೋಫಿ ನನ್ನ ಕೈಗಿತ್ತರು. ನನ್ನ ಪಾಲಿಗೆ ಅದೊಂದು ಅಪೂರ್ವ ಅನುಭವ' ಎಂದು ಖಲೀಲ್ ಹೇಳಿದ್ದಾರೆ.
ನನಗೆ ಮಾತೇ ಬರಲಿಲ್ಲ
'ವಿಜೇತ ಟ್ರೋಫಿಯನ್ನು ನನಗೆ ಹಿಡಿದುಕೊಳ್ಳಲು ಧೋನಿ, ರೋಹಿತ್ ಗೆ ಹೇಳಿದ್ದು ನೋಡುವಾಗ ನನಗಂತೂ ಮಾತೇ ಬರಲಿಲ್ಲ. ಅಷ್ಟರಮಟ್ಟಿಗೆ ಭಾವುಕನಾಗಿದ್ದ ಕ್ಷಣವದು. ನಾನದನ್ನು ಯಾವತ್ತಿಗೂ ಮರೆಯಲಾರೆ' ಎಂದು ಖಲೀಲ್ ಖುಷಿಯ ಕ್ಷಣವನ್ನು ಸ್ಮರಿಸಿಕೊಂಡರು. (ಚಿತ್ರ ಕೃಪೆ: Cricadium)