ಮುಂಬಯಿ, ಏಪ್ರಿಲ್ 25: ಈಸ್ಟರ್ ಸಂಭ್ರಮಾಚರಣೆಯಂದು ಶ್ರೀಲಂಕಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ಅನಿಲ್ ಕುಂಬ್ಳೆ ಕೂದಲೆಳೆ ಅಂತರದಲ್ಲಿ ಪಾರಾಗಿ ತಾಯ್ನಾಡಿಗೆ ಹಿಂದಿರುಗಿದ್ದಾರೆಂದು ವರದಿಯಾಗಿದೆ.
ಶ್ರೀಲಂಕಾ ಬಾಂಬ್ ಬ್ಲಾಸ್ಟ್: ಕ್ರೀಡಾ ಲೋಕದಿಂದ ಹರಿದ ಸಂತಾಪ
ಶ್ರೀಲಂಕಾದ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಅನುಸಾರ 48 ವರ್ಷದ ಮಾಜಿ ಕ್ರಿಕೆಟಿಗ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿ, ಬಾಂಬ್ ದಾಳಿಗೆ ಗುರಿಯಾದ ಶಾಂಗ್ರಿ ಲಾ ಹೋಟೆಲ್ನಲ್ಲೇ ತಂಗಿದ್ದರು.
ಬಾಂಬ್ ಸ್ಫೋಗೊಂಡ ಶಾಂಗ್ರಿ ಲಾ ಹೋಟೆಲ್ನ ಬ್ರೇಕ್ಫಾಸ್ಟ್ ಸ್ಥಳದಲ್ಲೇ ಶುಕ್ರವಾರ ಕುಟುಂಬ ಸಮೇತರಾಗಿ ಆಹಾರ ಸೇವಿಸಿದ್ದ ಕುಂಬ್ಳೆ, ಸರಣಿ ಸ್ಫೋಟ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಹೋಟೆಲ್ ತೊರೆದಿದ್ದರು ಎಂದು ಮೂಲಗಳು ಹೇಳಿವೆ.
ಶಾಂಗ್ರಿ ಲಾ ಹೋಟೆಲ್ನಿಂದ ಯಾಲಾ ರಾಷ್ಟ್ರೀಯ ಉದ್ಯಾನವನದ ಕಡೆಗೆ ಸಾಗಿದ್ದ ಕುಂಬ್ಳೆ, ತಾವು ತಂಗಿದ್ದ ಹೋಟೆಲ್ನಲ್ಲಿ ಭಾರಿ ಬಾಂಬ್ ಸ್ಫೋಟಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಮ್ಮ ಶ್ರೀಲಂಕಾ ಪ್ರವಾಸವನ್ನು ಅಲ್ಲಿಗೇ ನಿಲ್ಲಿಸಿದ್ದಾರೆ. ಬಳಿಕ ಮಂಗಳವಾರ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಶಾಂಗ್ರಿ ಲಾ ಹೋಟೆಲ್ನಲ್ಲಿ ಆಸ್ಟ್ರೇಲಿಯಾದ ಹಲವು ಯುವ ಕ್ರಿಕೆಟಿಗರು ಕೂಡ ತಂಗಿದ್ದರು. ಎಲ್ಲರೂ ತಮ್ಮ ಶ್ರೀಲಂಕಾ ಪ್ರವಾಸವನ್ನು ಮೊಟಕುಗೊಳಿಸಿ ತಾಯ್ನಾಡಿಗೆ ಹಿಂದಿರುಗಿದ್ದಾರೆ.
ಶ್ರೀಲಂಕಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟರೆ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.