
ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ ವಿಶೇಷ ದಾಖಲೆಯನ್ನು ತಮ್ಮ ಪರವಾಗಿ ಬರೆದುಕೊಂಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ನ್ಲಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತ ಬೌಲರ್ ಆಗಿ ಆರ್ ಅಶ್ವಿನ್ ಹೊರಹೊಮ್ಮಿದ್ದಾರೆ. ಭಾನುವಾರ ಜಿಂಬಾಬ್ವೆ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್ಗಳ ತಮ್ಮ ಕೋಟದಲ್ಲಿ ಅಶ್ವಿನ್ 22 ರನ್ಗಳನ್ನು ನೀಡಿ 3 ವಿಕೆಟ್ ಪಡೆದರು. ಈ ಪ್ರದರ್ಶಮದಿಂದಾಗಿ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 71 ರನ್ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ. ಈ ಬಾರಿಯ ಆವೃತ್ತಿಯಲ್ಲಿ ಅಶ್ವಿನ್ ಈವರೆಗೆ ಒಟ್ಟು 6 ವಿಕೆಟ್ ಕಬಳಿಸಿದ್ದಾರೆ.
ಈ ಪ್ರದರ್ಶನದೊಂದಿಗೆ ಆರ್ ಅಶ್ವಿನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಒಟ್ಟು 23 ಪಂದ್ಯಗಳಲ್ಲಿ 32 ವಿಕೆಟ್ಗಳನ್ನು ಸಂಪಾದಿಸಿದ್ದು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 16.40 ಸರಾಸರಿ ಹೊಂದಿರುವ ಅವರು 6.32ರಷ್ಟು ಅದ್ಭುತ ಎಕಾನಮಿ ಹೊಂದಿದ್ದಾರೆ. 11 ರನ್ಗಳನ್ನು ನೀಡಿ 4 ವಿಕೆಟ್ ಪಡೆದಿರುವುದು ಅಶ್ವಿನ್ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆಯಾಗಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ. ಶಕೀಬ್ 47 ವಿಕೆಟ್ಗಳನ್ನು ಟಿ20 ವಿಶ್ವಕಪ್ನಲ್ಲಿಯೇ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇದ್ದು 39 ವಿಕೆಟ್ ಸಂಪಾದಿಸಿದ್ದಾರೆ. ಮೂರನೇ ಸ್ಥಾದಲ್ಲಿರುವ ಲಸಿತ್ ಮಲಿಂಗ 38 ವಿಕೆಟ್ ಸಂಪಾದಿಸಿದ್ದಾರೆ.
ಇನ್ನು ಜಿಂಬಾಬ್ವೆ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರದರ್ಶನದಿಂದಾಗಿ ದೊಡ್ಡ ಮೊತ್ತದ ಗುರಿ ನೀಡಲು ಯಶಸ್ವಿಯಾಯಿತು. ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಅರ್ಧ ಶತಕ ಸಿಡಿಸಿ ಮಿಂಚಿದರೆ ನಂತರ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ಬೌಲರ್ಗಳಿಗೆ ಆಘಾತ ನೀಡಿದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 186 ರನ್ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಂಪೂರ್ಣವಾಗಿ ವಿಫಲವಾಯಿತು. ಸಿಕಂದರ್ ರಾಜಾ ಹಾಗೂ ರಿಯಾನ್ ಬರ್ಲ್ ಮಾತ್ರವೇ ಕೆಲ ಹೊತ್ತು ಹೋರಾಟ ನಡೆಸಿದ ಪರಿಣಾಮವಾಗಿ ಜಿಂಬಾಬ್ವೆ 115 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಈ ಮೂಲಕ ಈ ಪಂದ್ಯದಲ್ಲಿ 71 ರನ್ಗಳ ಬೃಹತ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರೆ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಸಂಪಾದಿಸಿದರು. ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.