

ಕೋಲ್ಕತ್ತಾ, ಡಿಸೆಂಬರ್ 23: ರಮೇಶ್ ಪೊವಾರ್ ಅವರಿಂದಾಗಿ ಸೃಷ್ಟಿಯಾಗಿದ್ದ ವಿವಾದದಿಂದಾಗಿ ನನಗೂ ನನ್ನ ಕುಟುಂಬಕ್ಕೂ ತೊಂದರೆಯಾಗಿತ್ತು ಎಂದು ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿರಾಜ್ ಭಾನುವಾರ (ಡಿಸೆಂಬರ್ 23) ಹೇಳಿದ್ದಾರೆ.
ಕಳೆದ ತಿಂಗಳು ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿತ್ತು. ಈ ಪಂದ್ಯದಲ್ಲಿ ಮಿಥಾಲಿ ಅವರನ್ನು ಆಡಿಸಿರಲಿಲ್ಲ. ಹೀಗಾಗಿ ವಿವಾದ ಹುಟ್ಟುಕೊಂಡಿತ್ತು. ವಿವಾದ ತೀವ್ರಗೊಂಡಿದ್ದರ ಪರಿಣಾಮ ತಂಡದ ಮುಖ್ಯ ತರಬೇತುದಾರ ರಮೇಶ್ ಪೊವಾರ್ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು.
ಕೋಲ್ಕತ್ತಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಿಥಾಲಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, 'ಕಳೆದೊಂದು ತಿಂಗಳು ನಾನು ನನ್ನ ಹೆತ್ತವರು ಮಾನಸಿಕ ಒತ್ತಡದಿಂದ ಕಳೆಯ ಬೇಕಾಗಿ ಬಂದಿತ್ತು. ಮಹಿಳಾ ಕ್ರಿಕೆಟ್ನಲ್ಲಿ ಹೀಗಾಗಿದ್ದು ಸರಿಯಲ್ಲ' ಎಂದರು.
'ವಿವಾದದಿಂದಾಗಿ ಆಟದೆಡೆಗಿನ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗಿರಲಿಲ್ಲ. ಮಾನಸಿಕವಾಗಿ ಅಷ್ಟೊಂದು ಒತ್ತಡವನ್ನು ನಾನು ಮತ್ತು ನನ್ನ ಮನೆಯವರು ಅನುಭವಿಸಿದ್ದೆವು. ಆದರೆ ಆಟದೆಡೆಗೆ ಮತ್ತೆ ಗಮನ ಕೇಂದ್ರೀಕರಿಸಿ ಮುನ್ನಡೆಯಲು ಈಗ ಸಕಾಲ' ಎಂದು ಮಿಥಾಲಿ ತಿಳಿಸಿದರು.
ವಿವಾದಕ್ಕೆ ಸಂಬಂಧಿಸಿ ತೆರವಾಗಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರರಾದ ಡಬ್ಲ್ಯೂವಿ ರಾಮನ್ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ (ಡಿಸೆಂಬರ್ 20) ಕೋಚ್ ಆಯ್ಕೆಯನ್ನು ಅಂತಿಮಗೊಳಿಸಲಾಗಿತ್ತು.