
ನಾರ್ಥ್ ಸೌಂಡ್, ನವೆಂಬರ್ 22: ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿ ಹೊತ್ತುಕೊಂಡಿರುವ ಹೊಸ ತರಬೇತುದಾರ ರಮೇಶ್ ಪೊವಾರ್ ಬಗ್ಗೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಮೇಶ್ ಅವರ ಉಪಸ್ಥಿತಿ ನಮ್ಮ ಮನಸ್ಥಿತಿಯನ್ನೇ ಬದಲಿಸಿತು ಎಂದು ಕೌರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗುರುವಾರ (ನವೆಂಬರ್ 22) ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ ಕೌರ್, ನಾವು ಸೆಮಿಫೈನಲ್ಗೆ ಪ್ರವೇಶಿಸುವಲ್ಲಿ ಕೋಚ್ ರಮೇಶ್ ಪೊವಾರ್ ಕೊಡುಗೆ ಪ್ರಮುಖವಾಗಿತ್ತು ಎಂದಿದ್ದಾರೆ.
ಹಿರಿಯ ಆಟಗಾರ್ತಿಯರ ನಡುವಿನ ಮನಸ್ಥಾಪಕ್ಕೆ ಸಂಬಂಧಿಸಿ ಹಿಂದಿನ ಕೋಚ್ ತುಷಾರ್ ಅರೋತೆ ಅವರು ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರಿಂದ ಅವರ ಸ್ಥಾನಕ್ಕೆ ಪೊವಾರ್ ಅವರನ್ನು ಕರೆತರಲಾಗಿತ್ತು. ಈಗ ಜವಾಬ್ದಾರಿ ವಹಿಸಿಕೊಂಡಿರುವ ರಮೇಶ್ ಬಗ್ಗೆ ತಂಡದಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
'ಉತ್ತಮ ಯೋಜನೆಗಳನ್ನು ಹೊಂದಿದ್ದೆವು. ಈಗ ದೊಡ್ಡ ಗುರಿಯನ್ನು ಬೆನ್ನತ್ತಲು ಶಕ್ತರಾಗಿದ್ದೇವೆ. ಆತ್ಮವಿಶ್ವಾಸವೇ ಬೇರೆ. ಆದರೆ ನಾನು ಈ ಗೆಲುವಿನ (ಸೆಮಿಫೈನಲ್ ತಲುಪಿದ್ದು) ಕ್ರೆಡಿಟ್ ಅನ್ನು ರಮೇಶ್ ಅವರಿಗೆ ನೀಡಲಿಚ್ಛಿಸುತ್ತೇನೆ' ಎಂದು ಕೌರ್ ಹೇಳಿದರು.