Ranji Trophy: ಶತಕದ ಸನಿಹದಲ್ಲಿ ಮಯಾಂಕ್ ಅಗರ್ವಾಲ್ : ಅತ್ಯುತ್ತಮ ಆರಂಭ ಪಡೆದ ಕರ್ನಾಟಕ

ಕೇರಳದ ವಿರುದ್ಧದ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ 2 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ತಿರುವನಂತಪುರಂನ ಸೈಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಮೊದಲ ಇನ್ನಿಂಗ್ಸ್ನಲ್ಲಿ 342 ರನ್ಗಳಿಗೆ ಆಲೌಟ್ ಆಯಿತು. ಸಚಿನ್ ಬೇಬಿ 141 ರನ್ ಗಳಿಸುವ ಮೂಲಕ ಕೇರಳಕ್ಕೆ ಆಸರೆಯಾದರು. ಜಲಜ್ ಸಕ್ಸೇನಾ 57 ರನ್ ಗಳಿಸಿ ಕೇರಳ ಉತ್ತಮ ಮೊತ್ತ ಕಲೆಹಾಕಲು ಸಹಾಯ ಮಾಡಿದರು.
ಮೊದಲನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದ್ದ ಕೇರಳ ಎರಡನೇ ದಿನ 98 ರನ್ ಗಳಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡಿತು.
ವಾಸುಕಿ ಕೌಶಿಕ್ 6 ವಿಕೆಟ್ ಪಡೆಯುವ ಮೂಲಕ ಕೇರಳಕ್ಕೆ ಮಾರಕವಾದರು. ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರೆ, ಕೃಷ್ಣಪ್ಪ ಗೌತಮ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ರವಿಕುಮಾರ್ ಸಮರ್ಥ್ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ಆಸರೆಯಾದ ಮಯಾಂಕ್ ಅಗರ್ವಾಲ್
ರವಿಕುಮಾರ್ ಸಮರ್ಥ್ ಶೂನ್ಯಕ್ಕೆ ಔಟಾದ ನಂತರ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟ ಆಡಿದರು. ಇವರಿಬ್ಬರೂ ಎರಡನೇ ವಿಕೆಟ್ಗೆ 89 ರನ್ಗಳ ಜೊತೆಯಾಟ ಆಡಿದರು.
29 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಔಟಾದ ನಂತರ ಕಣಕ್ಕಿಳಿದ ನಿಖಿನ್ ಜೋಸ್ ತಾಳ್ಮೆಯ ಇನ್ನಿಂಗ್ಸ್ ಆಡಿದರು. 75 ಎಸೆತಗಳನ್ನು ಎದುರಿಸಿದ ನಿಕಿನ್ ಜೋಸ್ 16 ರನ್ ಗಳನ್ನು ಗಳಿಸಿದರು. ವಿಕೆಟ್ ಕಳೆದುಕೊಳ್ಳದೆ ಕ್ರೀಸ್ ಕಚ್ಚಿ ನಿಂತ ಯುವ ಆಟಗಾರ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಾಯಕನ ಆಟವಾಡಿದ ಮಯಾಂಕ್ ಅಗರ್ವಾಲ್ ಎರಡನೇ ದಿನದಾಟದ ಅಂತ್ಯಕ್ಕೆ ಅಜೇಯ 87 ರನ್ ಗಳಿಸಿದ್ದು, ಶತಕದ ಸನಿಹದಲ್ಲಿದ್ದಾರೆ. ಸದ್ಯ ಕರ್ನಾಟಕ 205 ರನ್ಗಳ ಹಿನ್ನಡೆಯಲ್ಲಿದ್ದು ಮೂರನೇ ದಿನದಾಟದಲ್ಲಿ ಈ ಸ್ಕೋರ್ ದಾಟಿ ಮುನ್ನಡೆಯುವ ವಿಶ್ವಾಸದಲ್ಲಿದೆ.
ಎಲೈಟ್ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಮೊದಲನೇ ಸ್ಥಾನವನ್ನು ಉಳಿಸಿಕೊಳ್ಳಲಿದೆ. ಒಂದು ವೇಳೆ ಜಯ ಸಾಧಿಸಿದರೆ ಕರ್ನಾಟಕ ಮುಂದಿನ ಸುತ್ತಿಗೆ ನೇರವಾಗಿ ಅರ್ಹತೆ ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications