ವಿರಾಟ್ ಕೊಹ್ಲಿಯೇ ನಾಯಕತ್ವ ವಹಿಸಿಕೊಳ್ಳಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನೂತನ ನಾಯಕನನ್ನು ನೇಮಿಸುವ ಬದಲು ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ನಾಯಕನನ್ನಾಗಿ ನೇಮಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಅಜಿತ್ ಅಗರ್ಕರ್ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವವನ್ನು ಮತ್ತೊಮ್ಮೆ ವಹಿಸಿಕೊಳ್ಳಲು ಸಿದ್ಧರಿದ್ದರೆ ಮತ್ತು ಈ ಹಿಂದಿನ ರೀತಿಯೇ ಉತ್ಸುಕತೆಯಿಂದ ನಾಯಕತ್ವವನ್ನು ನಿರ್ವಹಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕತ್ವದ ಸಮಸ್ಯೆಗೆ ಉತ್ತಮ ಪರಿಹಾರ ಸಿಗಲಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಹೆಚ್ಚು ಹಣ ಇಲ್ಲದೇ ಆರ್ಸಿಬಿ ಎಡವುತ್ತಿದೆ
ಇನ್ನೂ ಮುಂದುವರಿದು ಮಾತನಾಡಿರುವ ಅಜಿತ್ ಅಗರ್ಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಬೀಸಬಲ್ಲ ಆಟಗಾರರನ್ನು ಖರೀದಿಸುವಷ್ಟು ಹಣವಿಲ್ಲದೇ ಎಡವುತ್ತಿದೆ ಎಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಮರ್ಥನೀಯವಾಗಿ ಆಡಬಲ್ಲ ಆಟಗಾರರನ್ನು ಖರೀದಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಿಪೂರ್ಣ ಬಲಿಷ್ಠ ತಂಡವಾಗಿರಲಿದೆ ಎಂಬುದು ಅಜಿತ್ ಅಗರ್ಕರ್ ಅವರ ಅಭಿಪ್ರಾಯ.
ಒಬ್ಬನ ಮೇಲೆ ಹಣ ಸುರಿದರೆ ಕಪ್ ಗೆಲ್ಲಲಾಗುವುದಿಲ್ಲ
ಹೀಗೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟಗಾರರಿಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿನ್ನಡೆ ಅನುಭವಿಸುತ್ತಿದೆ ಎಂದಿರುವ ಅಜಿತ್ ಅಗರ್ಕರ್ ಒಬ್ಬನೇ ಆಟಗಾರನ ಮೇಲೆ ಕೋಟಿ ಕೋಟಿ ಸುರಿದು ಖರೀದಿಸುವ ಬದಲು ಸಾಮರ್ಥ್ಯವುಳ್ಳ ಹಲವು ಆಟಗಾರರನ್ನು ಖರೀದಿಸಬೇಕು ಎಂದಿದ್ದಾರೆ. ಒಬ್ಬನ ಮೇಲೆಯೇ ಕೋಟಿ ಕೋಟಿ ಸುರಿದು ಖರೀದಿಸುವುದರಿಂದ ಕೆಲ ಪಂದ್ಯಗಳನ್ನು ಗೆಲ್ಲಬಹುದೇ ಹೊರತು ಟ್ರೋಫಿಯನ್ನು ಗೆಲ್ಲಲಾಗುವುದಿಲ್ಲ ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.