ಒಬ್ಬನ ಮೇಲೆ ಕೋಟಿ ಸುರಿದ ಆರ್ಸಿಬಿ ಕಪ್ ಗೆಲ್ಲುತ್ತಿಲ್ಲ; ಈತನಿಗೆ ನಾಯಕತ್ವ ನೀಡಿ ಎಂದ ಮಾಜಿ ಕ್ರಿಕೆಟಿಗ

ಈ ಬಾರಿಯ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಹೊಸ ತಂಡಗಳಾಗಿ ಅಹ್ಮದಾಬಾದ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೇರ್ಪಡೆಗೊಂಡಿವೆ.
ಹೀಗೆ ನೂತನ ತಂಡಗಳ ಆಗಮನವಾಗಿರುವುದರಿಂದ ಅಸ್ತಿತ್ವದಲ್ಲಿರುವ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ( ಗರಿಷ್ಠ 4 ) ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಹೊರ ಹಾಕಿವೆ. ಹೀಗೆ ರಿಟೈನ್ ಆಗದೇ ಹೊರಬಿದ್ದ ಆಟಗಾರರ ಪೈಕಿ ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಂಡು ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯವಿರುವಂತಹ ಆಟಗಾರರು ಕೂಡ ಇದ್ದಾರೆ. ಹೀಗೆ ನಾಯಕತ್ವದ ಜವಬ್ದಾರಿಯನ್ನು ನಿಭಾಯಿಸಬಲ್ಲ ಸಾಮರ್ಥ್ಯವಿರುವ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ನಾಯಕನಿಲ್ಲದ ಹಲವಾರು ಫ್ರಾಂಚೈಸಿಗಳು ಈ ಬಾರಿಯ ಮೆಗಾ ಹರಾಜಿನಲ್ಲಿ ಪ್ರಯತ್ನ ಮಾಡಲಿವೆ.
ಅದರಲ್ಲಿಯೂ ವಿಶೇಷವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ಈ ಬಾರಿಯ ಮೆಗಾ ಹರಾಜಿನಲ್ಲಿ ನಾಯಕನ ಖರೀದಿಗೆ ಹಣದ ಹೊಳೆ ಹರಿಸಲಿವೆ ಎನ್ನಲಾಗುತ್ತಿದೆ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಿದ ಕಾರಣದಿಂದಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ನಾಯಕನನ್ನು ಖರೀದಿಸಲೇಬೇಕಾದ ಅನಿವಾರ್ಯತೆಯಿದೆ. ಸದ್ಯ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವುದೇ ಆಟಗಾರನನ್ನು ಕೂಡ ನಾಯಕ ಎಂದು ಘೋಷಿಸಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನ ಖರೀದಿಗಾಗಿ ಕಾಯುತ್ತಿರುವುದು ಖಚಿತ ಎಂದು ಹಲವಾರು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ತಂಡದಲ್ಲಿರುವ ಆಟಗಾರರಿಗೆ ನಾಯಕನ ಜವಾಬ್ದಾರಿ ನೀಡುವುದು ಉತ್ತಮ ಎಂದು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿಯೇ ನಾಯಕತ್ವ ವಹಿಸಿಕೊಳ್ಳಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನೂತನ ನಾಯಕನನ್ನು ನೇಮಿಸುವ ಬದಲು ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ನಾಯಕನನ್ನಾಗಿ ನೇಮಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಅಜಿತ್ ಅಗರ್ಕರ್ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವವನ್ನು ಮತ್ತೊಮ್ಮೆ ವಹಿಸಿಕೊಳ್ಳಲು ಸಿದ್ಧರಿದ್ದರೆ ಮತ್ತು ಈ ಹಿಂದಿನ ರೀತಿಯೇ ಉತ್ಸುಕತೆಯಿಂದ ನಾಯಕತ್ವವನ್ನು ನಿರ್ವಹಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕತ್ವದ ಸಮಸ್ಯೆಗೆ ಉತ್ತಮ ಪರಿಹಾರ ಸಿಗಲಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಹೆಚ್ಚು ಹಣ ಇಲ್ಲದೇ ಆರ್ಸಿಬಿ ಎಡವುತ್ತಿದೆ
ಇನ್ನೂ ಮುಂದುವರಿದು ಮಾತನಾಡಿರುವ ಅಜಿತ್ ಅಗರ್ಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಬೀಸಬಲ್ಲ ಆಟಗಾರರನ್ನು ಖರೀದಿಸುವಷ್ಟು ಹಣವಿಲ್ಲದೇ ಎಡವುತ್ತಿದೆ ಎಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಮರ್ಥನೀಯವಾಗಿ ಆಡಬಲ್ಲ ಆಟಗಾರರನ್ನು ಖರೀದಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಿಪೂರ್ಣ ಬಲಿಷ್ಠ ತಂಡವಾಗಿರಲಿದೆ ಎಂಬುದು ಅಜಿತ್ ಅಗರ್ಕರ್ ಅವರ ಅಭಿಪ್ರಾಯ.

ಒಬ್ಬನ ಮೇಲೆ ಹಣ ಸುರಿದರೆ ಕಪ್ ಗೆಲ್ಲಲಾಗುವುದಿಲ್ಲ
ಹೀಗೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟಗಾರರಿಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿನ್ನಡೆ ಅನುಭವಿಸುತ್ತಿದೆ ಎಂದಿರುವ ಅಜಿತ್ ಅಗರ್ಕರ್ ಒಬ್ಬನೇ ಆಟಗಾರನ ಮೇಲೆ ಕೋಟಿ ಕೋಟಿ ಸುರಿದು ಖರೀದಿಸುವ ಬದಲು ಸಾಮರ್ಥ್ಯವುಳ್ಳ ಹಲವು ಆಟಗಾರರನ್ನು ಖರೀದಿಸಬೇಕು ಎಂದಿದ್ದಾರೆ. ಒಬ್ಬನ ಮೇಲೆಯೇ ಕೋಟಿ ಕೋಟಿ ಸುರಿದು ಖರೀದಿಸುವುದರಿಂದ ಕೆಲ ಪಂದ್ಯಗಳನ್ನು ಗೆಲ್ಲಬಹುದೇ ಹೊರತು ಟ್ರೋಫಿಯನ್ನು ಗೆಲ್ಲಲಾಗುವುದಿಲ್ಲ ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications