ಕೊಲ್ಕತ್ತಾ, ನವೆಂಬರ್ 18 : ಈಡನ್ಸ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಭಾರತ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಶ್ರೀಲಂಕಾ ಉತ್ತಮ ಸ್ಥಿತಿಯಲ್ಲಿದೆ.
ಮೊದಲೆರಡು ದಿನ ಮಳೆಯ ಆಟ ಹಾಗೂ ಶ್ರೀಲಂಕಾ ಬೌಲರ್ ಗಳ ಕರಾರುವಾಕ್ ದಾಳಿಯ ಮುಂದೆ ಭಾರತದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡಿದರು.

ಎರಡನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ಭಾರತ ತಂಡ 75 ರನ್ ಗಳಿಸಿತ್ತು. ಮೂರನೇ ದಿನ ಬ್ಯಾಟಿಂಗ್ ಪ್ರಾರಂಭ ಮಾಡಿದ ಚೆತೇಶ್ವರ್ ಪೂಜಾರಾ ಹೆಚ್ಚು ಹೊತ್ತೇನು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ವೃದ್ಧಿಮಾನ್ ಸಹಾ (29) ಗಳಿಸಿ ಪೆರೆರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರವೀಂದ್ರ ಜಡೇಜಾ (22 ರನ್), ಭುವನೇಶ್ವರ್ ಕುಮಾರ್ (13), ಶಮಿ (24) ಕೊಂಚ ಪ್ರತಿರೋಧ ತೋರಿದರು.
ಮಧ್ಯಾಹ್ನದ ಊಟದ ಬಿಡುವಿಗೆ ಮುಂಚೆ ಭಾರತದ ಎಲ್ಲ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದರು. ನಂತರ ಪ್ರಾರಂಭವಾದ ಶ್ರೀಲಂಕಾದ ಬ್ಯಾಟಿಂಗ್ ಕೂಡ ಮೊದಲಿಗೆ ಭಾರತದ ಬ್ಯಾಟಿಂಗ್ ಅನ್ನೇ ಹೋಲುವಂತಿತ್ತು.

ಓಪನರ್ ಕರುಣಾರತ್ನೆ ಬೇಗನೆ ಔಟ್ ಆದರು (8), ಮತ್ತೊಬ್ಬ ಓಪನರ್ ಸಮರವಿಕ್ರಮ (23) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮೂರು ಮತ್ತು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ತಿರುಮಾನೆ ಮತ್ತು ಮ್ಯಾತಿವ್ಸ್ ತಾಳ್ಮೆಯುತ ಬ್ಯಾಟಿಂಗ್ ನಿಂದ ಭಾರತದ ಬೌಲರ್ ಗಳಿಗೆ ಬೆವರಿಳಿಸಿದರು. ಇಬ್ಬರೂ ಕ್ರಮವಾಗಿ 51 ಮತ್ತು 52 ರನ್ ಗಳಿಸಿ ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಮೂರನೇ ದಿನದಾಟ ಮಗಿಯುವ ವೇಳೆಗೆ ಚಾಂಡಿಮಾಲ್ (13) ಮತ್ತು ದಿಕ್ ವೆಲ್ಲಾ (14) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಶ್ರೀಲಂಕಾದ ತಂಡದ ಒಟ್ಟು ಮೊತ್ತ 165 ರನ್ ಆ ಮೂಲಕ ಶ್ರೀಲಂಕಾ ಭಾರತದ ವಿರುದ್ಧ 7 ರನ್ ಗಳ ಹಿಂದಿದೆಯಷ್ಟೆ.
ನಾಳೆ ಪೂರ್ಣ ದಿನ ಶ್ರೀಲಂಕಾ ಬಳಿ ಇದ್ದು, ಇನ್ನೂ 6 ವಿಕೆಟ್ ಕೈನಲ್ಲಿದೆ. ಪ್ರಸ್ತುತ ಶ್ರೀಲಂಕಾ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದೆಯಾದರೂ ಪಂದ್ಯ ಡ್ರಾ ಆಗುವ ಸಾಧ್ಯತೆ ದಟ್ಟವಾಗಿದೆ.