ಟಿ20 ವಿಶ್ವಕಪ್: ಈ 5 ಅಂಶಗಳು ಸರಿ ಇದ್ದಿದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಇರುತ್ತಿತ್ತು!

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸದೇ ಸೂಪರ್ 12 ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಹೌದು, ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ಹಾಗೂ ಫೈನಲ್ ಪ್ರವೇಶಿಸಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಲಾಗುತ್ತಿತ್ತು. ಟ್ರೋಫಿ ಗೆಲ್ಲಬಹುದಾದ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಟೂರ್ನಿ ಆರಂಭಕ್ಕೂ ಮುನ್ನ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿಯೂ ಕೂಡ ಅಬ್ಬರಿಸಿ ಗೆಲುವನ್ನು ಸಾಧಿಸಿತ್ತು.
ಈ ಎಲ್ಲಾ ಕಾರಣಗಳಿಂದಲೇ ಟೀಮ್ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂಬ ದೊಡ್ಡ ಮಟ್ಟದ ನಿರೀಕ್ಷೆ ಕೂಡ ಹುಟ್ಟಿಕೊಂಡಿತ್ತು. ಆದರೆ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಆರಂಭವಾದ ನಂತರ ನಡೆದದ್ದೇ ಬೇರೆ. ಟೂರ್ನಿಯಲ್ಲಿ ಟೀಮ್ ಇಂಡಿಯಾ ಯೋಜನೆಯಂತೆ ಯಾವುದೂ ಸಹ ನೆರವೇರಲಿಲ್ಲ. ಮೊದಲಿಗೆ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಬದ್ಧ ವೈರಿಯಾದ ಪಾಕಿಸ್ತಾನದ ವಿರುದ್ಧ ಸೆಣಸಾಡಿದ ಟೀಮ್ ಇಂಡಿಯಾ ಹೀನಾಯವಾಗಿ ಸೋತಿತ್ತು. ಇದೇ ಮೊದಲ ಬಾರಿಗೆ ವಿಶ್ವಕಪ್ ಹಣಾಹಣಿಯ ಪಂದ್ಯವೊಂದರಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿದ ಪಾಕಿಸ್ತಾನ 10 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಇದಾದ ಬಳಿಕ ನಡೆದ ಟೀಮ್ ಇಂಡಿಯಾದ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಗಿತ್ತು. ಈ ಪಂದ್ಯದಲ್ಲಿಯೂ ಕೂಡಾ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತು. ಹೀಗೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ತನ್ನ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ಆಗಲೇ ಎಡವಿತ್ತು.
ನಂತರ ನಡೆದ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸತತವಾಗಿ ಗೆಲುವನ್ನು ಸಾಧಿಸಿತು. ಹೀಗೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಒಟ್ಟು 5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಜಯಗಳಿಸಿ, 2 ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಹೀಗೆ ಸುಮಾರು 5 ವರ್ಷಗಳ ನಂತರ ಮರಳಿ ಬಂದಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿ ಟೂರ್ನಿಯಿಂದ ಹೊರ ಬೀಳಲು ಕಾರಣವಾದ 5 ಅಂಶಗಳ ವಿವರ ಈ ಕೆಳಕಂಡಂತಿದೆ ಓದಿ..

1. ಟಾಸ್
ಸೂಪರ್ 12 ಹಂತದಲ್ಲಿನ ಟೀಮ್ ಇಂಡಿಯಾದ ಮೊದಲೆರಡು ಪಂದ್ಯಗಳಲ್ಲಿ ಟಾಸ್ ದೊಡ್ಡ ಮಟ್ಟದಲ್ಲಿಯೇ ಪ್ರಭಾವವನ್ನು ಬೀರಿತು ಎಂದು ಹೇಳಬಹುದು. ಹೌದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಟಾಸ್ ಸೋತಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎಂದೇ ಹೇಳಬಹುದು. ಟಾಸ್ ಗೆಲುವು ನಮ್ಮ ಕೈನಲ್ಲಿ ಇಲ್ಲದೇ ಇದ್ದರೂ ಕೂಡ ಟಾಸ್ ಸೋತದ್ದು ಮಾತ್ರ ಆ ಎರಡೂ ಪಂದ್ಯಗಳ ಸೋಲಿಗೆ ಕಾರಣವಾಗಿರುವುದಂತೂ ನಿಜ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಯಾವುದಾದರೊಂದು ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದಿದ್ದರೂ ಪಂದ್ಯದಲ್ಲಿ ಗೆಲುವು ಸಾಧಿಸಬಹುದಿತ್ತೇನೋ ಎಂದೆನಿಸದೇ ಇರಲಾರದು.

2. ಕೈಕೊಟ್ಟ ಆರಂಭಿಕ ಆಟಗಾರರು
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿರುವುದಕ್ಕೆ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ನೀಡಿದ ಕಳಪೆ ಪ್ರದರ್ಶನವೂ ಕೂಡ ಪ್ರಮುಖ ಕಾರಣಗಳಲ್ಲೊಂದು. ಈ ಇಬ್ಬರೂ ಆಟಗಾರರು ಸಹ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಬೇಗನೇ ವಿಕೆಟ್ ಒಪ್ಪಿಸಿ ಮೈದಾನದಿಂದ ನಿರ್ಗಮಿಸಿದ್ದು ಟೀಮ್ ಇಂಡಿಯಾ ಅಲ್ಪ ಮೊತ್ತ ಕಲೆಹಾಕಲು ಕಾರಣವಾಯಿತು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಈ ಇಬ್ಬರೂ ಬೇಗನೇ ವಿಕೆಟ್ ಒಪ್ಪಿಸಿದ್ದು ನಂತರ ಬಂದ ಆಟಗಾರರಿಗೆ ಹೆಚ್ಚಿನ ಒತ್ತಡವನ್ನು ಹೇರಿದ್ದು ಸುಳ್ಳಲ್ಲ.

3. ಬೌಲರ್ಗಳ ಕಳಪೆ ಪ್ರದರ್ಶನ
ಟೀಮ್ ಇಂಡಿಯಾ ಬೌಲರ್ಗಳು ತಂಡದ ಮೊದಲೆರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನವನ್ನು ನೀಡಿದರು ಎಂದರೆ ತಪ್ಪಾಗಲಾರದು. ಮೊದಲಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಕೂಡ ಪಡೆಯಲಾಗದ ಟೀಮ್ ಇಂಡಿಯಾ ಬೌಲರ್ಗಳು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದರು. ಅದು ಕೂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಅವರೇ 2 ವಿಕೆಟ್ ಪಡೆದುಕೊಂಡಿದ್ದರು. ಹೀಗೆ ಮೊದಲೆರಡು ಪಂದ್ಯಗಳ ಪೈಕಿ ಕೇವಲ 2 ವಿಕೆಟ್ ಮಾತ್ರ ಪಡೆದ ಟೀಮ್ ಇಂಡಿಯಾ ಬೌಲರ್ಗಳು ಕಳಪೆ ಪ್ರದರ್ಶನವನ್ನು ನೀಡಿದರು. ಈ ಮಹತ್ವದ ಪಂದ್ಯಗಳಲ್ಲಿ ಬೌಲರ್ಗಳು ತಂಡಕ್ಕೆ ಬೇಕಾಗಿದ್ದ ಜವಬ್ದಾರಿಯುತ ಪ್ರದರ್ಶನವನ್ನೇನಾದರೂ ನೀಡಿದ್ದರೆ ಇಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ಅರ್ಹತೆ ಪಡೆದುಕೊಳ್ಳುತ್ತಿತ್ತೇನೋ.

4. ಮಧ್ಯಮ ಕ್ರಮಾಂಕ ಬ್ಯಾಟಿಂಗ್ ವೈಫಲ್ಯ
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಆರಂಭಿಕ ಆಟಗಾರರು ಮಾತ್ರವಲ್ಲದೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳೂ ಸಹ ಕೈ ಕೊಟ್ಟರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೋರಾಟಕ್ಕೆ ರಿಷಭ್ ಪಂತ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಸಹಕರಿಸಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೂಡ ಅಷ್ಟೇ ಪವರ್ಪ್ಲೇ ಮುಗಿದ ಬಳಿಕ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಬೌಂಡರಿ ಬಾರಿಸಲು ಹರಸಾಹಸ ಪಡುತ್ತಿದ್ದರು. ಹೀಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ಗಳು ರನ್ ಕಲೆಹಾಕುವಲ್ಲಿ ವಿಫಲ ಹೊಂದಿದ್ದೂ ಕೂಡ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿರುವಲ್ಲಿ ಹಿನ್ನಡೆಯನ್ನುಂಟು ಮಾಡಿತು ಎಂದರೆ ತಪ್ಪಾಗಲಾರದು.

5. ರವಿಚಂದ್ರನ್ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡದೇ ಇದ್ದದ್ದು
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಂತಹ ಮಹತ್ವದ ಟೂರ್ನಿಗಳಲ್ಲಿ ಅನುಭವವನ್ನು ಹೊಂದಿರುವಂತಹ ಆಟಗಾರರಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಆದರೆ ತಂಡದಲ್ಲಿ ಅನುಭವವನ್ನು ಹೊಂದಿರುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಇಟ್ಟುಕೊಂಡು, ಅವರ ಬದಲು ಯುವ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಮಹತ್ವದ ಪಂದ್ಯಗಳಲ್ಲಿ ಅವಕಾಶವನ್ನು ನೀಡಿದ್ದು ಕೂಡ ಟೀಮ್ ಇಂಡಿಯಾದ ವಿಫಲತೆಗೆ ಪ್ರಮುಖ ಕಾರಣವಾಯಿತು. ನಂತರದ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶವನ್ನು ನೀಡಿದರೂ ಕೂಡ ಆ ಹೊತ್ತಿಗೆ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿಯಿಂದ ಪಕ್ಕಕ್ಕೆ ಸರಿದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications