ಒಂದೆಡೆ ಶಿಖರ್ ಧವನ್ ನೇತೃತ್ವದಲ್ಲಿ ಯುವ ಅಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಿದ್ದರೆ ಇತ್ತ ಟಿ20 ವಿಶ್ವಕಪ್ ಆಡಲಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರಯಾಣಿ ಬೆಳೆಸಿದ್ದು ಈಗಾಗಲೇ ಆಸಿಸ್ ನಾಡಿಗೆ ತಲುಪಿದೆ. ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಭಾರತ ತಂಡ ಟೂರ್ನಿಗೆ ಅಂತಿಮ ಸಿದ್ಧತೆಯನ್ನು ಮಾಡಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಟೀಮ್ ಇಂಡಿಯಾ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಇತ್ತೀಚಿನ ಸರಣಿಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡಿದೆ. ಇದು ಮುಂದಿನ ವಿಶ್ವಕಪ್ಗೆ ಭಾರತ ತಂಡಕ್ಕೆ ಅತ್ಯಂತ ಸ್ಪೂರ್ತಿಯ ಅಂಶ ಎಂದಿದ್ದಾರೆ ಸಂಜಯ್ ಬಂಗಾರ್.
T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಪ್ರಿಕಾ ವಿರುದ್ಧ ಭಾರತ ತಂಡ ತಲಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿ ಗೆಲುವು ಸಾಧಿಸಿತ್ತು. ಈ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಮಾತ್ರ ಅಮೋಘ ಪ್ರದರ್ಶನದಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ ಕೂಡ ಲಯವನ್ನು ಕಂಡುಕೊಂಡಿರುವುದು ವಿಶ್ವಕಪ್ ದೃಷ್ಟಿಯಿಂದ ತಂಡಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.
ಸ್ಟಾರ್ಸ್ಪೋರ್ಟ್ಸ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಬ್ಯಾಟಿಂಗ ಕೋಚ್ ಸಂಜಯ್ ಬಂಗಾರ್ "ಭಾರತ ತಂಡದ ಹುರುಪಿ ನಿಜಕ್ಕೂ ಅದ್ಭುತವಾಗಿದೆ. ಇತ್ತೀಚೆಗೆ ನಡೆದ ಸರಣಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ವಿಭಾಗ ನೀಡಿರುವ ಪ್ರದರ್ಶನದಿಂದಾಗಿ ಸಹಜವಾಗಿ ಸಕಾರಾತ್ಮಕ ಬಲವನ್ನು ನೀಡುತ್ತದೆ" ಎಂದಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಸಂಜಯ್ ಬಂಗಾರ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಬೌಲರ್ಗಳು ಕಠಿಣ ಪಾಠಗಳನ್ನು ಕಲಿಯಬೇಕಾಗಿದೆ ಎಂದಿರುವ ಬಂಗಾರ್ ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ಗೆ ಬೌಲಿಂಗ್ ವಿಭಾಗ ಸಿದ್ಧಪಡಿಸಿರುವ ಯೋಜನೆಯನ್ನು ಪರಾಮರ್ಶಿಸಲು ಸಮಯದೊರೆಯುತ್ತದೆ ಎಂದಿದ್ದಾರೆ.
ಭಾರತ ತಂಡ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಪಾಕಿಸ್ತಾನದ ವಿರುದ್ಧ ಸೂಪರ್-12 ಹಂತದ ಅಭಿಯಾನವನ್ನು ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ಇತ್ತೀಚೆಗೆ ಏಷ್ಯಾಕಪ್ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು ಭಾರತ ಮೊದಲ ಪಂದ್ಯವನ್ನು ಗೆದ್ದಿತು. ಆದರೆ ಮುಂದಿನ ಹಂತದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿತ್ತು.