
ಟಿ20 ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವಾಗಿ ಟೂರ್ನಿಗೆ ಪ್ರವೇಶಿಸಿದ್ದ ಭಾರತ ಸೆಮಿಫೈನಲ್ ಪ್ರವೇಶ ಪಡೆಯುವಲ್ಲಿಯೂ ವಿಫಲವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಈಗ ಸಾಕಷ್ಟು ಕಟು ವಿಮರ್ಶೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಒಂದು ವಿಭಾಗದ ವೈಫಲ್ಯ ಭಾರತ ಶೀಘ್ರವಾಗಿ ನಿರ್ಗಮಿಸಲು ಕಾರಣವಾಗಿದೆ ಎಂದಿದ್ದಾರೆ.
ಐಪಿಎಲ್ನಿಂದ ನೇರವಾಗಿ ಟಿ20 ವಿಶ್ವಕಪ್ನಲ್ಲಿ ಆಡಲು ಸಜ್ಜಾದ ಭಾರತ ಅಭ್ಯಾಸ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಆದರೆ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಭಾರತ ನಂತರ ನ್ಯೂಜಿಲೆಂಡ್ ವಿರುದ್ಧವೂ ಸೋಲುವ ಮೂಲಕ ಸೆಮಿಫೈನಲ್ ಕನಸಿಗೆ ಬಹುತೇಕ ತಣ್ಣೀರೆರಚಿಕೊಂಡಿತ್ತು. ಇದೀಗ ಅಧಿಕೃತವಾಗಿ ಸೆಮಿಫೈನಲ್ ಹೋರಾಟದಿಂದ ಭಾರತ ತಂಡ ಹೊರಬಿದ್ದಿದೆ. ಆದರೆ ಭಾರತ ತಂಡ ಈ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಲು ಬ್ಯಾಟಿಂಗ್ ವಿಭಾಗದಲ್ಲಿ ಕಳಪೆ ಪ್ರದರ್ಶನವೇ ಕಾರಣ ಎಂದು ನೇರವಾಗಿ ಚಾಟಿ ಬೀಸಿದ್ದಾರೆ ಸುನಿಲ್ ಗವಾಸ್ಕರ್.
"ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆ ತಂಡಗಳ ಬೌಲರ್ಗಳು ಭಾರತೀಯ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಭಾರತ ತಮಡದ ದಾಂಡಿಗರಿಗೆ ಹೆಚ್ಚಿನ ರನ್ಗಳಿಸಲು ಅವರು ಅವಕಾಶವನ್ನೇ ನೀಡಲಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಯಾಯಿತು. ಮತ್ತೊಂದೆಡೆ ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬನಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ನೆರವನ್ನು ನೀಡಿತ್ತು. ಯಾಕೆಂದರೆ ಚೆಂಡು ಹೆಚ್ಚು ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಸ್ಪಿನ್ನರ್ಗಳ ಎಸೆತಗಳು ನೇರವಾಗಿ ಹೋಗುತ್ತಿತ್ತು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.
"ಇಂತಾ ಸಂದರ್ಭಗಳಲ್ಲಿ ಎರಡನೇ ಸರದಿಯಲ್ಲಿ ಬ್ಯಾಟಿಂಗ್ ನಡೆಸುವುದು ನಿಜಕ್ಕೂ ಒಳ್ಳೆಯ ಅವಕಾಶ. ಆದರೆ 180ಕ್ಕೂ ಅಧಿಕ ರನ್ಗಳನ್ನು ನೀವು ಗಳಿಸಲು ಸಾಧ್ಯವಾದರೆ ನಿಮ್ಮ ಬೌಲರ್ಗಳು 20-30ರಷ್ಟು ಹೆಚ್ಚಿನ ಅವಕಾಶ ದೊರೆಯುತ್ತಿತ್ತು. ಆದರೆ 111 ರನ್ಗಳನ್ನು ನೀವು ಗಳಿಸಿದಾಗ ಇಬ್ಬನಿ ಹೆಚ್ಚಿನದೇನೂ ಮಾಡಲಾರದು. ನೀವು ರನ್ಗಳಿಸಲಿಲ್ಲ. ಅದೇ ಕಾರಣಕ್ಕೆ ನೀವು ಸೋತಿದ್ದೀರಿ ಅಲ್ಲದೆ ಬೇರೆ ಯಾವುದೇ ಕಾರಣಗಳು ಇಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಇದೇ ಸಂದರ್ಭದಲ್ಲಿ ಗವಾಸ್ಕರ್ ಸಂಪೂರ್ಣ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಾಗಿ ಹೆಚ್ಚಿನ ಅನುಕೂಲತೆಗಳು ದೊರೆಯಲಾರದು ಎಂಬ ಮಾತನ್ನು ಕೂಡ ಹೇಳಿದ್ದಾರೆ. "ಸಂಪೂರ್ಣವಾಗಿ ತಂಡದಲ್ಲಿ ಬದಲಾವಣೆ ಮಾಡುವುದರಿಂದಾಗಿ ವ್ಯತ್ಯಾಸಗಳನ್ನು ಮಾಡಬಹುದು ಎಂದು ನಾನು ಭಾವಿಸಲಾರೆ. ನೀವು ನಿಮ್ಮ ವಿಧಾನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ. ಉದಾಹರಣೆಗೆ ಪವರ್ಪ್ಲೇಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕಳೆದ ಹಲವು ಪಂದ್ಯಗಳಲ್ಲಿ ಭಾರತ ಇದರಲ್ಲಿ ವಿಫಲವಾಗಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ. "ಮೊದಲ ಆರು ಓವರ್ಗಳಲ್ಲಿ 30 ಯಾರ್ಡ್ ಸರ್ಕಲ್ನ ಆಚೆ ಕೇವಲ 2 ಫೀಲ್ಡರ್ಗಳು ಮಾತ್ರವೇ ಇರುತ್ತಾರೆ. ಆದರೆ ಕಳೆದ ಕೆಲ ಐಸಿಸಿ ಟೂರ್ನಮೆಂಟ್ಗಳಲ್ಲಿ ಭಾರತ ಇದರ ಲಾಭವನ್ನು ಪಡೆದುಕೊಳ್ಳಲೇ ಇಲ್ಲ" ಎಂದು ಕೂಡ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಲಿಷ್ಠ ತಂಡಗಳ ವಿರುದ್ಧ ಭಾರತ ರನ್ ಗಳಿಸುತ್ತಿಲ್ಲ: ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಬಲಿಷ್ಠ ತಂಡಗಳ ವಿರುದ್ಧ ಅಥವಾ ಉತ್ತಮ ಬೌಲರ್ಗಳನ್ನು ಹೊಂದಿರುವ ತಂಡದ ವಿರುದ್ಧ ರನ್ಗಳಿಸುತ್ತಿಲ್ಲ ಎಂದಿದ್ದಾರೆ ಸುನಿಲ್ ಗವಾಸ್ಕರ್. ಅಲ್ಲದೆ ಭಾರತ ಇದನ್ನು ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದಿದ್ದಾರೆ ಗವಾಸ್ಕರ್.