ಬಾರ್ಡರ್-ಗವಾಸ್ಕರ್ ಟ್ರೋಫಿ 2023: ಕೆಎಲ್ ರಾಹುಲ್ ಬದಲಿಗೆ ಅವಕಾಶ ಪಡೆಯಬಹುದಾದ ಬ್ಯಾಟರ್ಗಳು ಇವರು!

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಬದಲಾಗಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದರು. ಭಾರತ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ಕೆಎಲ್ ರಾಹುಲ್ ರನ್ ಗಳಿಸುವಲ್ಲಿ ವಿಫಲರಾದರು.
ಶುಭಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಕೆಎಲ್ ರಾಹುಲ್ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 22, 23, 10 ಮತ್ತು 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಶುಭಮನ್ ಗಿಲ್ ಮೂರು ಇನ್ನಿಂಗ್ಸ್ಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದರೂ, ಛತ್ತೋಗ್ರಾಮ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿ ಗಮನ ಸೆಳೆದರು.
ಬಾಂಗ್ಲಾದೇಶದ ವಿರುದ್ಧದ ಕಳಪೆ ಬ್ಯಾಟಿಂಗ್ ಪ್ರದರ್ಶನ ನಂತರ ಕೆಎಲ್ ರಾಹುಲ್ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಲಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ರನ್ನು ಕೈಬಿಡಲು ನಿರ್ಧರಿಸಲಾಗಿದೆ.
ಭಾರತ 2023ರ ಫೆಬ್ರವರಿ-ಮಾರ್ಚ್ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಅರ್ಹತೆ ಪಡೆಯಬೇಕಾದರೆ ಟೀಂ ಇಂಡಿಯಾ ಈ ಸರಣಿಯಲ್ಲಿ ಗೆಲುವು ಸಾಧಿಸಬೇಕಿದೆ. ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ರನ್ನು ಈ ಸರಣಿಯಿಂದ ಕೂಡ ಕೈಬಿಡುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರಕಾರ, ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ಗೆ ಫಿಟ್ ಆಗಿದ್ದರೆ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಲಿದೆ. ರೋಹಿತ್ ಶರ್ಮಾ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಬಾರ್ಡರ್-ಗವಾಸ್ಕರ್ ಟ್ರೋಫಿ 2023 ಕ್ಕೆ ರಾಹುಲ್ ಅವರನ್ನು ಕೈಬಿಟ್ಟರೆ ತಂಡದಲ್ಲಿ ಬ್ಯಾಕಪ್ ಆರಂಭಿಕರಾಗಿ ಸೇರಿಸಬಹುದಾದ ಮೂವರು ಆಟಗಾರರು ಇವರು.

ಉತ್ತಮ ಫಾರ್ಮ್ನಲ್ಲಿರುವ ಅಭಿಮನ್ಯು ಈಶ್ವರನ್
ರೋಹಿತ್ ಶರ್ಮಾ ಗಾಯಗೊಂಡ ನಂತರ ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ರನ್ನು ತಂಡಕ್ಕಾಗಿ ಆಯ್ಕೆ ಮಾಡಲಾಯಿತು. ಆದರೆ, ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ ಕಾರಣ, ಈಶ್ವರನ್ ಆಡುವ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾದರು.
ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ರನ್ನು ತಂಡದಿಂದ ಹೊರಗಿಟ್ಟರೆ, ಬ್ಯಾಕಪ್ ಆಟಗಾರನಾಗಿ ಅಭಿಮನ್ಯು ಈಶ್ವರನ್ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ. ಈಶ್ವರನ್, ಬಾಂಗ್ಲಾದೇಶದ ಪ್ರವಾಸದಲ್ಲಿ ಭಾರತ ಎ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಮೊದಲನೇ ಪಂದ್ಯದಲ್ಲಿ ಅವರು 141 ರನ್ ಮತ್ತು 2ನೇ ಪಂದ್ಯದಲ್ಲಿ 157 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಡಿಸೆಂಬರ್ 2013 ರಲ್ಲಿ ದೇಶೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಈಶ್ವರನ್ 78 ಪಂದ್ಯಗಳಲ್ಲಿ 45.33 ಸರಾಸರಿಯಲ್ಲಿ 18 ಶತಕಗಳೊಂದಿಗೆ 5576 ರನ್ ಗಳಿಸಿದ್ದಾರೆ.
PAK vs NZ: 9ನೇ ಟೆಸ್ಟ್ ಶತಕ ಬಾರಿಸಿ ಈ ಅಂಕಿಅಂಶದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್ ಅಜಂ

ಪೃಥ್ವಿ ಶಾ ಕೂಡ ಅತ್ಯುತ್ತಮ ಆಯ್ಕೆ
ಎರಡು ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಪೃಥ್ವಿ ಶಾ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಪದಾರ್ಪಣೆ ಮಾಡಿದರು, 23 ವರ್ಷದ ಆಟಗಾರ, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ದಾಖಲಿಸಿದರು. ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎನಿಸಿಕೊಂಡರು.
ಪೃಥ್ವಿ ಶಾ ಇದುವರೆಗೂ ಭಾರತಕ್ಕಾಗಿ ಕೇವಲ 5 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ 0 ಮತ್ತು 4 ರನ್ ಗಳಿಸಿದ ನಂತರ ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ರನ್ ಗಳಿಸಿಲ್ಲ, ಎರಡು ಪಂದ್ಯಗಳನ್ನಾಡಿದ್ದು, 13, 9 ಮತ್ತು 6 ರನ್ ಗಳಿಸಿದ್ದಾರೆ. ಆದರೂ ದೇಶೀಯ ಕ್ರಿಕೆಟ್ನಲ್ಲಿ ಅವರ ಸಾಧನೆ ಉತ್ತಮವಾಗಿದೆ. 38 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 11 ಮತ್ತು 14 ಅರ್ಧಶತಕಗಳೊಂದಿಗೆ 48.03 ಸರಾಸರಿಯಲ್ಲಿ 3122 ರನ್ ಗಳಿಸಿದ್ದಾರೆ.
ಪೃಥ್ವಿ ಶಾ ಆರಂಭಿಕ ಸ್ಥಾನಕ್ಕೆ ಸೂಕ್ತ ಆಟಗಾರನಾಗಿದ್ದು, ಕೆಎಲ್ ರಾಹುಲ್ ಬದಲಿಗೆ ಬ್ಯಾಕಪ್ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆ ಹೊಂದಿದ್ದಾರೆ.

ರಣಜಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕ್ ಪಾಂಚಾಲ್
ಗುಜರಾತ್ ತಂಡದ ನಾಯಕರಾಗಿರುವ ಪ್ರಿಯಾಂಕ್ ಪಾಂಚಾಲ್ ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನಿಂಗ್ಸ್ ಆರಂಭಿಸುವ ಪ್ರಿಯಾಂಕ್ ಸ್ಥಿರ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅವರು ಎರಡು ಪಂದ್ಯಗಳನ್ನಾಡಿದ್ದು, ಕ್ರಮವಾಗಿ 111, 85, 52 ಮತ್ತು 0 ರನ್ ಗಳಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡಿದರು, ಏಳು ಪಂದ್ಯಗಳಲ್ಲಿ 50.57 ಸರಾಸರಿಯಲ್ಲಿ ಎರಡು ಶತಕಗಳೊಂದಿಗೆ 354 ರನ್ ಗಳಿಸಿದರು. 2008 ರಲ್ಲಿ ದೇಶೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪ್ರಿಯಾಂಕ್, 108 ಪಂದ್ಯಗಳನ್ನಾಡಿದ್ದು, 45.30 ಸರಾಸರಿಯಲ್ಲಿ 7566 ರನ್ ಗಳಿಸಿದ್ದಾರೆ. ಅವರು ಇದುವರೆಗೂ 25 ಶತಕಗಳನ್ನು ಸಿಡಿಸಿದ್ದಾರೆ. 2021ರಲ್ಲಿಯೇ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications