
ಭಾರತದ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಿಗುತ್ತಿರುವಷ್ಟು ಅವಕಾಶ ಬೇರೆ ಯಾವುದೇ ದೇಶದ ಯುವ ಆಟಗಾರರಿಗೂ ಸಿಗುತ್ತಿಲ್ಲ ಎಂದೇ ಹೇಳಬಹುದು. ಒಂದೇ ಸಮಯದಲ್ಲಿ 2 ಅಂತಾರಾಷ್ಟ್ರೀಯ ತಂಡಗಳನ್ನು ಬೇರೆ ದೇಶಗಳಿಗೆ ಪ್ರವಾಸಕ್ಕೆ ಕಳುಹಿಸುವಷ್ಟು ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾರತದಲ್ಲಿದ್ದಾರೆ.
ಹೀಗೆ ಎರಡೆರಡು ಅಂತಾರಾಷ್ಟ್ರೀಯ ತಂಡಗಳನ್ನು ಕಟ್ಟಿದರೂ ಸಹ ಇನ್ನೂ ಅನೇಕ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವರುಣ್ ಚಕ್ರವರ್ತಿಗೆ ಏಕದಿನ ಸರಣಿಯ 3 ಪಂದ್ಯಗಳಲ್ಲಿ ಯಾವುದೇ ಪಂದ್ಯದಲ್ಲಿಯೂ ಸಹ ಆಡುವ ಅವಕಾಶ ಸಿಗಲೇ ಇಲ್ಲ. ಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಐವರು ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನು ನೀಡಲಾಯಿತು. ಈ ಪಂದ್ಯದ ನಂತರ ವರುಣ್ ಚಕ್ರವರ್ತಿಗೆ ಅವಕಾಶ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದರು.
ಹೀಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿರುವ ವರುಣ್ ಚಕ್ರವರ್ತಿಗೆ ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡುತ್ತಾರಾ ಎಂಬ ಚರ್ಚೆಗಳು ಜೋರಾಗಿವೆ. ವರುಣ್ ಚಕ್ರವರ್ತಿ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿರುವ ದೇವದತ್ ಪಡಿಕ್ಕಲ್ ಅವರಿಗೂ ಟಿ ಟ್ವೆಂಟಿ ಸರಣಿಯಲ್ಲಿ ಅವಕಾಶ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.