
ಬೆಂಗಳೂರು, ಫೆಬ್ರವರಿ 08: ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ಮುಂದುವರೆಸಿದೆ. ಅಸ್ಸಾಂಗೆ ಗೆಲ್ಲಲು 304ರನ್ ಗುರಿ ನೀಡಲಾಗಿತ್ತು. ವೇಗಿ ಪ್ರಸಿದ್ಧ್ ಕೃಷ್ಣ ದಾಳಿಗೆ ತತ್ತರಿಸಿದ ಅಸ್ಸಾಂ 192 ಸ್ಕೋರಿಗೆ ಆಲೌಟ್ ಆಗಿದೆ. ಅಸ್ಸಾಂ ವಿರುದ್ಧ 111 ರನ್ ಗಳ ಅಂತರದಲ್ಲಿ ಕರ್ನಾಟಕ ಜಯ ದಾಖಲಿಸಿದೆ.
ಅಸ್ಸಾಂ ಪರ ಶಿವಶಂಕರ್ ರಾಯ್ 64, ಅಬು ನೆಚಿಮ್ 43ರನ್ ಗಳಿಸಿ ಅಜೇಯರಾಗಿ ಉಳಿದು, ಕೊಂಚ ಪ್ರತಿರೋಧ ತೋರಿದರು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 8.2 ಓವರ್ ಗಳಲ್ಲಿ 33ರನ್ನಿತ್ತು 6 ವಿಕೆಟ್ ಕಬಳಿಸಿದರು. ಟಿ ಪ್ರದೀಪ್ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.
ಆಸ್ಸಾಂ ವಿರುದ್ಧ ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಲೋಕೇಶ್ ರಾಹುಲ್ ಹಾಗೂ ಮಯಾಂಕ್ ಅಗರವಾಲ್ ಉತ್ತಮ ಆರಂಭ ಒದಗಿಸಿದರು. ರಾಹುಲ್ 22ರನ್ ಗಳಿಸಿದರೆ, ಮಯಾಂಕ್ ಅಗರವಾಲ್ 87 ಎಸೆತಗಳಲ್ಲಿ 84ರನ್ ಗಳಿಸಿದರು.
ನಾಯಕ ಕರುಣ್ ನಾಯರ್ 58ರನ್, ರವಿಕುಮಾರ್ ಸಮರ್ಥ್ ಅಜೇಯ 70ರನ್, ಪವನ್ ದೇಶಪಾಂಡೆ 43ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಕರ್ನಾಟಕ 50 ಓವರ್ ಗಳಲ್ಲಿ 303/6 ಸ್ಕೋರ್ ಮಾಡಿತು.